ಬೆಂಗಳೂರು: ನಗರದ ಉತ್ತರಹಳ್ಳಿಯ ಗೌಡನಪಾಳ್ಯ ನಿವಾಸಿ ಹಂಸಕುಮಾರಿ (22) ಸೇಂಟ್ಜಾನ್ ಆಸ್ಪತ್ರೆಯಲ್ಲಿ ಶುಕ್ರವಾರ ಡೆಂಗೆ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಬಿಬಿಎಂಪಿಯು ಈ ಸಾವು ಅಂಗಾಂಗ ವೈಫಲ್ಯದಿಂದ ಸಂಭವಿಸಿದೆ ಎಂದು ಧೃಢಪಡಿಸಿದೆ.
ಈ ಬಗ್ಗೆ `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಮೃತರ ಸಂಬಂಧಿ ಆನಂದ್, `ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ಹಂಸಕುಮಾರಿ ಅವರು ಮೂರು ವಾರಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದರು.
ಮನೆಯ ಸಮೀಪವೊಂದರ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಆನಂತರ ಜ್ವರ ತೀವ್ರವಾಗಿದ್ದರಿಂದ, ಸಿ.ಎಸ್.ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಡೆಂಗೆ ನೆಗೆಟೀವ್ ಎಂದು ವೈದ್ಯರು ವರದಿ ನೀಡಿದ್ದರು.
ಟೈಫಾಯಿಡ್, ಮೂತ್ರ ಸೋಂಕಿನಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗೆ ಸೆಂಟ್ ಜಾನ್ಸ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಸ್ಥಿತಿ ಗಂಭೀರವಾಗಿದ್ದರಿಂದ ತೀರಿಕೊಂಡರು~ ಎಂದು ತಿಳಿಸಿದರು.
ಈ ನಡುವೆ, ಪಾಲಿಕೆಯ ನೋಡಲ್ ಅಧಿಕಾರಿ (ಡೆಂಗೆ ಜ್ವರ) ಆನಂದ್, `ಡೆಂಗೆ ಜ್ವರದಿಂದ ಸಾವು ಸಂಭವಿಸಿಲ್ಲ. ಈ ಪ್ರಕರಣದ ಕುರಿತು ಸೇಂಟ್ ಜಾನ್ ಆಸ್ಪತ್ರೆಯನ್ನು ಸಂಪರ್ಕಿಸಲಾಗಿತ್ತು. ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಬಂದಿದೆ. ಅಲ್ಲದೇ ಸಿ.ಎಸ್. ಆಸ್ಪತ್ರೆಯಲ್ಲೂ ಡೆಂಗೆ ನೆಗೆಟೀವ್ ಎಂದು ವರದಿಯಾಗಿತ್ತು. ಹಾಗಾಗಿ ಇದು ಡೆಂಗೆಯಲ್ಲ~ ಎಂದು ಸ್ಪಷ್ಟಪಡಿಸಿದರು.