ಲಂಡನ್ (ಪಿಟಿಐ): ಮುಂಬರುವ ಲಂಡನ್ ಒಲಿಂಪಿಕ್ ಕೂಟಕ್ಕೆ ಪ್ರಾಯೋಜಕತ್ವ ವಹಿಸಿರುವ `ಡೌ~ ರಾಸಾಯನಿಕ ಕಂಪೆನಿಯ ವಿರುದ್ಧದ ತನ್ನ ಹೋರಾಟವನ್ನು ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಮತ್ತಷ್ಟು ಬಲಪಡಿಸಿದೆ.
`ಡೌ~ ಕಂಪೆನಿಯನ್ನು ಒಲಿಂಪಿಕ್ನ ಪ್ರಾಯೋಜಕತ್ವದಿಂದ ಕೈಬಿಡಬೇಕೆಂದು ಕೋರಿ ಐಒಎಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಲಂಡನ್ ಕೂಟದ ಸಂಘಟಕರಿಗೆ ಮತ್ತೆ ಪತ್ರ ಬರೆದಿದೆ. ತನ್ನ ಈ ಮೊದಲಿನ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಲಭಿಸದ ಕಾರಣ ಐಒಎ ಈ ಹೆಜ್ಜೆಯಿಟ್ಟಿದೆ.
ಐಒಎ ಹಂಗಾಮಿ ಅಧ್ಯಕ್ಷ ವಿ.ಕೆ. ಮಲ್ಹೋತ್ರ ಅವರು ಐಒಸಿ ಅಧ್ಯಕ್ಷ ಜಾಕಸ್ ರಾಗ್ಗೆ ಬರೆದ ಪತ್ರದಲ್ಲಿ, `ಡೌ ಕಂಪೆನಿ ಲಂಡನ್ ಕೂಟದ ಪ್ರಾಯೋಜಕತ್ವ ವಹಿಸಿರುವುದಕ್ಕೆ ವಿಶ್ವದ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಈ ಕಂಪೆನಿಯ ಪ್ರಾಯೋಜಕತ್ವವನ್ನು ವಿರೋಧಿಸಿ ಒಲಿಂಪಿಕ್ ಕೂಟದ ನಡವಳಿಕೆ ಆಯೋಗದ ಆಯುಕ್ತರು ಕೂಡಾ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಐಒಎಯ ನಿಲುವನ್ನು ಸಮರ್ಥಿಸಿದೆ~ ಎಂದಿದ್ದಾರೆ.
ಪತ್ರದ ಒಂದು ಪ್ರತಿಯನ್ನೂ ಕೂಟದ ಸಂಘಟಕರಿಗೂ ಕಳುಹಿಸಲಾಗಿದೆ. `ಡೌ~ ಕಂಪೆನಿಯ ಪ್ರಾಯೋಜಕತ್ವವನ್ನು ಪ್ರತಿಭಟಿಸಿ ನಡವಳಿಕೆ ಆಯೋಗದ ಆಯುಕ್ತರಾದ ಮೆರೆಡಿತ್ ಅಲೆಕ್ಸಾಂಡರ್ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು.
1984ರಲ್ಲಿ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾಗಿದ್ದ ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ ಕಂಪೆನಿ ಈಗ ಒಲಿಂಪಿಕ್ಸ್ಗೆ ಪ್ರಾಯೋಜಕತ್ವ ವಹಿಸಿರುವ `ಡೌ~ ಆಡಳಿತದಲ್ಲಿದೆ. ಈ ಕಾರಣದಿಂದ ಭಾರತ ತನ್ನ ವಿರೋಧ ವ್ಯಕ್ತಪಡಿಸಿದೆ. ನೋಂ ಚೋಮ್ಸ್ಕಿ ಅವರಂತಹ ಬುದ್ಧಿಜೀವಿಗಳು ಕೂಡಾ ಇದನ್ನು ವಿರೋಧಿಸಿದ್ದಾರೆ.