ಬೆಂಗಳೂರು: ಡ್ರಾಪ್ ನೀಡುವ ನೆಪದಲ್ಲಿ ವೃದ್ದೆಯೊಬ್ಬರನ್ನು ಆಟೊದಲ್ಲಿ ಕೂರಿಸಿಕೊಂಡ ಇಬ್ಬರು ಮಹಿಳೆಯರು, ಅವರ ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿರುವ ಘಟನೆ ಜಾಲಹಳ್ಳಿ ಸಮೀಪದ ಬಿಇಎಲ್ ಆಸ್ಪತ್ರೆ ಬಳಿ ಬುಧವಾರ ನಡೆದಿದೆ.
ಈ ಸಂಬಂಧ ಮತ್ತೀಕೆರೆ ನಿವಾಸಿ ದುರ್ಗಮ್ಮ (63) ಎಂಬುವರು ದೂರು ಕೊಟ್ಟಿದ್ದಾರೆ. ಬೆಳಿಗ್ಗೆ ಬಿಇಎಲ್ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದ ಅವರು, ಮನೆಗೆ ವಾಪಸ್ ಬರುವಾಗ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
‘ದುರ್ಗಮ್ಮ ಅವರ ಪತಿ ಬಿಇಎಲ್ ಸಂಸ್ಥೆಯ ನಿವೃತ್ತ ನೌಕರ. ಹೀಗಾಗಿ ಸಂಸ್ಥೆಗೆ ಸೇರಿದ ಆಸ್ಪತ್ರೆಯಲ್ಲೇ ಕುಟುಂಬ ಸದಸ್ಯರು ಉಚಿತ ವೈದ್ಯಕೀಯ ಸೌಲಭ್ಯ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣದಿಂದ ತಪಾಸಣೆಗೆಂದು ಬೆಳಿಗ್ಗೆ ಆಸ್ಪತ್ರೆಗೆ ಹೋಗಿದ್ದ ದುರ್ಗಮ್ಮ, ಮನೆಗೆ ಹಿಂದಿರುಗುತ್ತಿದ್ದಾಗ ಆಟೊದಲ್ಲಿ ಬಂದ ಇಬ್ಬರು ಮಹಿಳೆಯರು ಡ್ರಾಪ್ ನೀಡುವುದಾಗಿ ದುರ್ಗಮ್ಮ ಅವರನ್ನು ಆಟೊದಲ್ಲಿ ಕೂರಿಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಮಾತನಾಡಿಸುತ್ತಲೇ ದುರ್ಗಮ್ಮ ಅವರ ಗಮನ ಬೇರೆಡೆ ಸೆಳೆದ ಮಹಿಳೆಯರು, ಅವರಿಗೆ ತಿಳಿಯದಂತೆ 30 ಗ್ರಾಂ ಸರ ಕಿತ್ತುಕೊಂಡು ಮನೆ ಸಮೀಪ ಡ್ರಾಪ್ ಮಾಡಿ ಹೋಗಿದ್ದಾರೆ. ಈ ವಿಷಯ ತಿಳಿಯದ ದುರ್ಗಮ್ಮ ಅವರಿಗೆ ಮನೆಗೆ ಹೋದಾಗ ತಾವು ಮೋಸ ಹೋಗಿರುವ ಸಂಗತಿ ಗೊತ್ತಾಗಿದೆ’ ಎಂದು ಜಾಲಹಳ್ಳಿ ಪೊಲೀಸರು ಹೇಳಿದರು. ಪ್ರಕರಣ ದಾಖಲಾಗಿದೆ.