ಪರ್ತ್ (ಪಿಟಿಐ): ಭಾರತ ಕ್ರಿಕೆಟ್ ತಂಡದೊಳಗೆ ಯಾವುದೇ ಒಡಕು ಇಲ್ಲ. ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದಾರೆ ಎಂದು ಹಿರಿಯ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ನುಡಿದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಬಂದ ವರದಿಯನ್ನು ನಿರಾಕರಿಸಿದ್ದಾರೆ.
ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಸತತ ಎರಡು ಸೋಲು ಅನುಭವಿಸಿದ ಪ್ರವಾಸಿ ತಂಡದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂದು `ದಿ ಕೊರಿಯರ್ ಮೇಲ್~ ಮಂಗಳವಾರ ವರದಿ ಮಾಡಿತ್ತು. ವೀರೇಂದ್ರ ಸೆಹ್ವಾಗ್ ಕೆಲವು ಆಟಗಾರರ ಮೂಲಕ ಗುಂಪುಗಾರಿಕೆ ನಡೆಸುತ್ತಿದ್ದಾರೆ ಎಂದೂ ವರದಿ ತಿಳಿಸಿತ್ತು.
ಸೆಹ್ವಾಗ್ ಮತ್ತು ನಾಯಕ ದೋನಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿ ಸತ್ಯಕ್ಕೆ ದೂರವಾದುದು ಎಂದು ದ್ರಾವಿಡ್ ಹೇಳಿದರು.
`ಕಳಪೆ ಪ್ರದರ್ಶನ ನೀಡಿದರೆ ತಂಡದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಸೆಹ್ವಾಗ್ ಹಾಗೂ ದೋನಿಗೆ ಸಂಬಂಧಿಸಿದಂತೆ ಎದ್ದಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ. ತಂಡದ ಸ್ಫೂರ್ತಿ ಚೆನ್ನಾಗಿಯೇ ಇದೆ~ ಎಂದು ವರದಿಗಾರರಿಗೆ ತಿಳಿಸಿದರು.
`ತಂಡದ ಕೆಲವು ಆಟಗಾರರು ದೋನಿ ಬದಲಿಗೆ ಸೆಹ್ವಾಗ್ ನಾಯಕತ್ವ ವಹಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಸ್ವತಃ ಮಹಿ ತಂಡದ ಹಿತವನ್ನು ಪರಿಗಣಿಸದೆಯೇ ಆಡುತ್ತಿದ್ದಾರೆ~ ಎಂದು ವರದಿಯಲ್ಲಿ ತಿಳಿಸಲಾಗಿತ್ತು.