ಬೆಂಗಳೂರು: ನಗರದ ಕೆ.ಆರ್.ಪುರ ರೈಲ್ವೆ ಸೇತುವೆ ಬಳಿ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಅಳವಡಿಸಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿದ ಸಂಬಂಧ ಶಾಸಕ ಎನ್.ಎಸ್.ನಂದೀಶ್ರೆಡ್ಡಿ ಸೇರಿದಂತೆ ಮೂವರ ವಿರುದ್ಧ ಮಹದೇವಪುರ ಠಾಣೆಯಲ್ಲಿ ಅಸಂಜ್ಞೇಯ ಪ್ರಕರಣ ದಾಖಲಾಗಿದೆ.
ಕೆ.ಆರ್.ಪುರ ರೈಲ್ವೆ ಸೇತುವೆ ಸಮೀಪ ರಸ್ತೆ ಕಿರಿದಾಗಿರುವುದರಿಂದ ಪ್ರತಿನಿತ್ಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ನಂದೀಶ್ರೆಡ್ಡಿ, ಬಿಬಿಎಂಪಿ ಸದಸ್ಯ ಎಸ್.ಎಸ್.ಪ್ರಸಾದ್, ಬಿಜೆಪಿ ಮುಖಂಡ ಶಿವರಾಜ್ ಮತ್ತಿತರರು ರೈಲ್ವೆ ಇಲಾಖೆಗೆ ಸೇರಿದ ಸೇತುವೆ ಬಳಿಯ ಜಾಗಕ್ಕೆ ಅಳವಡಿಸಿದ್ದ ತಂತಿ ಬೇಲಿಯನ್ನು ಶುಕ್ರವಾರ ತೆರವುಗೊಳಿಸಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟರು.
ಆದರೆ, ರೈಲ್ವೆ ಇಲಾಖೆ ಅಧಿಕಾರಿ ಸಾಯಿಭಾಸ್ಕರ್ ಎಂಬುವರು `ಇಲಾಖೆಗೆ ಸೇರಿದ ಜಾಗದಲ್ಲಿ ಅಳವಡಿಸಿದ್ದ ತಂತಿ ಬೇಲಿಯನ್ನು ಶಾಸಕ ನಂದೀಶ್ರೆಡ್ಡಿ ಮತ್ತು ಅವರ ಬೆಂಬಲಿಗರು ಕಾನೂನು ಬಾಹಿರವಾಗಿ ತೆರವುಗೊಳಿಸಿದ್ದಾರೆ. ತಂತಿ ಬೇಲಿ ತೆರವುಗೊಳಿಸಲು ಅವರು ಇಲಾಖೆಯ ಅನುಮತಿ ಪಡೆದಿರಲಿಲ್ಲ~ ಎಂದು ದೂರು ಕೊಟ್ಟಿದ್ದಾರೆ ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.