ಗೋಣಿಕೊಪ್ಪಲು: ಹಳ್ಳಿಗಾಡಿನ ಪುಟಾಣಿಗಳ ಅರಿವಿನ ಬಟ್ಟಲಿಗೆ ಅಕ್ಷರ ಅನ್ನ ನೀಡುತ್ತಿರುವ ವಿದ್ಯಾದೇಗುಲ ಮಂಚಳ್ಳಿ ಸರ್ಕಾರಿ ಕನ್ನಡ ಶಾಲೆ.
ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ಬ್ರಹ್ಮಗಿರಿ ತಪ್ಪಲಲ್ಲಿ ಇರುವ ಈ ಹಿರಿಯ ಪ್ರಾಥಮಿಕ ಶಾಲೆ ಪ್ರಸಿದ್ಧ ಇರ್ಪು ಜಲಪಾತಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿದೆ.
1ರಿಂದ 7ನೇ ತರಗತಿವರೆಗೆ 140 ವಿದ್ಯಾರ್ಥಿಗಳು, ಮುಖ್ಯೋಪಾಧ್ಯಾಯರು ಸೇರಿ 5ಮಂದಿ ಶಿಕ್ಷಕರಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು ಮಕ್ಕಳಿಗೆ ಉತ್ತಮ ಪಾಠ ಪ್ರವಚನ ನಡೆಯುತ್ತಿದೆ. ಶೇ.99ರಷ್ಟು ಹಾಜರಾತಿಯೂ ಇದೆ.
ವಿದ್ಯಾರ್ಥಿಗಳನ್ನು 4ಗುಂಪುಗಳಾಗಿ ವಿಂಗಡಿಸಿ ಶಾಲೆಗೆ ಗೈರು ಹಾಜರಾಗುವ ಮಕ್ಕಳನ್ನು ಕರೆತರಲು ಮೀನಾ ತಂಡಕ್ಕೆ ಜವಾಬ್ದಾರಿ ವಹಿಸಲಾಗಿದೆ. ಜ್ಞಾನ ದಾಸೋಹಕ್ಕೆ ಉತ್ತಮ ಗ್ರಂಥಾಲಯವ್ದ್ದಿದು, 3 ಸಾವಿರ ಪುಸ್ತಕಗಳಿವೆ. ಬಿಡುವಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.
ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಇದೇ ಶಾಲೆಯ ವಿದ್ಯಾರ್ಥಿ ಎಂಬುದು ಮತ್ತೊಂದು ಹಿರಿಮೆ. ಇಲ್ಲಿ ವ್ಯಾಸಂಗ ಮಾಡಿದವರು ಹೆಸರಾಂತ ವೈದ್ಯರು, ಎಂಜಿನಿಯರ್ಸ್, ಅಧ್ಯಾಪಕರು ಹಾಗೂ ಇತರ ಅಧಿಕಾರಿಗಳೂ ಆಗಿದ್ದಾರೆ.
ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಮಚ್ಚಾಮಾಡ ಕಾರ್ಯಪ್ಪ, ಸದಸ್ಯರಾಗಿ ಚೋಡುಮಾಡ ಸುಬ್ಬಯ್ಯ, ಬಿ.ಎ. ಮಂಜುಳಾ, ಟಿ.ಸಿ.ಕರುಂಬಯ್ಯ, ಕೆ.ಯು.ಅಪ್ಪಣ್ಣ, ಎಂ.ಬಿ.ಸುಬ್ರಮಣಿ, ಎ.ಎಸ್.ಬೋಪಣ್ಣ, ಟಿ.ಕೆ.ವೇಣು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.