ಚಾಮರಾಜನಗರ: ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಮುನಿಸಿಕೊಂಡು ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವನ್ನಾಗಿ ಮಾಡಿರುವ ಮಳೆರಾಯ ಶನಿವಾರ ಸಂಜೆ ನಗರದ ನಾಗರಿಕರಿಗೆ ಕೊಂಚ ತಂಪು ನೀಡಿದ್ದಾನೆ.
ನಗರದ ವ್ಯಾಪ್ತಿ ಸಂಜೆ ಸುಮಾರು 20 ನಿಮಿಷ ಕಾಲ ಧಾರಾಕಾರ ಮಳೆ ಸುರಿಯಿತು. ಬಿಸಿಲಿನಿಂದ ಕೆಂಗೆಟ್ಟಿದ್ದ ಜನರಿಗೆ ಕೊಂಚ ನೆಮ್ಮದಿ ತಂದಿದೆ. ಸಕಾಲದಲ್ಲಿ ಮಳೆ ಬೀಳದೆ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಈಗ ಸುರಿದಿರುವ ಮಳೆಯಿಂದ ಯಾವುದೇ ಉಪಯೋಗವಿಲ್ಲ. ಒಣಗಿ ನಿಂತಿರುವ ಬೆಳೆಗಳಿಗೆ ಪ್ರಯೋಜನವಾಗುವುದಿಲ್ಲ ಎಂಬುದು ರೈತರ ಅಳಲು.
ಬಿಸಿಲಿನ ಧಗೆ ನಿತ್ಯವೂ ಏರಿಕೆಯಾಗುತಿತ್ತು. ಒಂದೆಡೆ ನಗರಸಭೆಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯೂ ಇಲ್ಲದಂತಾಗಿದೆ. ಮತ್ತೊಂದೆಡೆ ವಿದ್ಯುತ್ ವ್ಯತ್ಯಯದಿಂದ ಕನಿಷ್ಠ ಪ್ಯಾನ್ ಕೂಡ ಬಳಸಲು ಸಾಧ್ಯವಾಗದೆ ಸೆಖೆಗೆ ನಾಗರಿಕರು ಕಂಗಾಲಾಗಿದ್ದರು. ಈಗ ಮಳೆರಾಯ ಕೊಂಚ ತಂಪು ನೀಡಿದ್ದಾನೆ.