ಕೋಲಾರ: ತಂಬಾಕು ಮಾರಾಟ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿರುವ ಸರ್ಕಾರವೇ ತಂಬಾಕು ಬೆಳೆಯಲು ಉತ್ತೇಜನ ನೀಡುತ್ತದೆ. ಇಂಥ ದ್ವಂದ್ವ ನೀತಿ ಕಾರಣಕ್ಕೆ ಕಾಯ್ದೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಆರ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಂಬಾಕು ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಯಾವುದೇ ವಸ್ತುವಿನ ಬಳಕೆಯನ್ನು ನಿಷೇಧಿಸುವ ಮುನ್ನ ಅದರ ಉತ್ಪಾದನೆಯನ್ನು ನಿಲ್ಲಿಸಬೇಕು. ಆದರೆ ಸರ್ಕಾರ ಆ ಕೆಲಸವನ್ನು ಮಾಡದೇ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಿ ಎನ್ನುವುದು ವಿಪರ್ಯಾಸ ಎಂದರು.
ಮದ್ಯಪಾನವನ್ನು ಯಾರೂ ಮಾಡಬಾರದು ಎಂದೂ ಸರ್ಕಾರ ಹೇಳುತ್ತದೆ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಮದ್ಯ ಮಾರಾಟದಿಂದ ದೊರಕುವ ಅಪಾರ ತೆರಿಗೆಗಳನ್ನೇ ನೆಚ್ಚಿಕೊಂಡಿದೆ ಎಂದು ವ್ಯಂಗ್ಯವಾಡಿದರು.
ಶಾಲೆಯ ಅಕ್ಕ ಪಕ್ಕದಲ್ಲೇ ತಂಬಾಕು ಮಾರಾಟ ನಡೆಯುತ್ತಿದೆ. ಮಕ್ಕಳ ಎದುರಿನಲ್ಲೇ ದೊಡ್ಡವರು ಬೀಡಿ, ಸಿಗರೇಟು ಸೇದುತ್ತಾರೆ. ಗುಟಕಾ, ಪಾನ್ ಪರಾಗ್ ಮತ್ತಿತರೆ ತಂಬಾಕು ಉತ್ಪನ್ನಗಳನ್ನು ಜಗಿದು ಉಗಿಯುತ್ತಾರೆ. ಇಂಥ ಸನ್ನಿವೇಶ ಬದಲಿಸಲು ಹೊಸ ಬಗೆಯಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ತಂಬಾಕು ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಪೊಲೀಸರೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯನ್ನು ಮತ್ತೊಂದು ಇಲಾಖೆ ಮೇಲೆ ಹೊರೆಸಿ ನೆಪ ಹೇಳುವ ಪ್ರವೃತ್ತಿಅಧಿಕಾರಿಗಳು ಬಿಡಬೇಕು ಎಂದರು.
ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಐ.ಜಮೀಲ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಮೀರ್ ಪಾಷಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರಮೇಶಬಾಬು ಮಾತನಾಡಿದರು.
ನಂತರ, ದೇವರಾಜ ಅರಸ್ ವೈದ್ಯಕೀಯ ಕಾಲೇಜಿನ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಮುನಿನಾರಾಯಣ, ಡಾ.ಅನಿಲ್ ಮತ್ತು ಡಾ.ಜಗನ್ನಾಥ್ ಉಪನ್ಯಾಸ ನೀಡಿದರು.