ತುಮಕೂರು: ಮೈಸೂರು ಜಿಲ್ಲೆಯಲ್ಲಿ ಬೆಳೆಯುವ ವರ್ಜೀನಿಯಾ ತಂಬಾಕು ಹದ ಮಾಡಲು ಇಲ್ಲಿಂದ ಲಕ್ಷಾಂತರ ಟನ್ ಕಟ್ಟಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ವನ್ಯಜೀವಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಆಪಾದಿಸಿದ್ದಾರೆ.
ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ತಂಬಾಕು ಹದ ಮಾಡಲು 5 ಲಕ್ಷ ಟನ್ ಕಟ್ಟಿಗೆ ಬೇಕು. ಅಲ್ಲಿ ಉರುವಲು ಸಂಗ್ರಹ ನಿರ್ಬಂಧಿಸಲಾಗಿದೆ. ಹೀಗಾಗಿ ಜಿಲ್ಲೆಯ ವಿವಿಧೆಡೆ ದಲ್ಲಾಳಿಗಳು ರೈತರ ಹೊಲಗಳಿಂದ ಹೊಂಗೆ, ಬೇವು, ಜಾಲಿ, ಹುಣಸೆ, ಕಗ್ಗಲಿ ಮರಗಳನ್ನು ಖರೀದಿಸಿ, ಕಡಿದು ಸಾಗಣೆ ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಹಸಿರು ಕಡಿಮೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.