ಬೆಂಗಳೂರು: `ನಂದಿಕೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ಸ್ಥಳೀಯ ಪರಿಸರದ ಮೇಲೆ ಆಗುತ್ತಿರುವ ಹಾನಿ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿದ್ದ ಸಮಿತಿಯ ಎರಡು ಸ್ಥಾನಗಳಿಗೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸೂಚಿಸುವ ವ್ಯಕ್ತಿಗಳನ್ನು ನೇಮಕ ಮಾಡಲು ಸಿದ್ಧ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಗೃಹ ಕಚೇರಿ `ಕೃಷ್ಣಾ~ದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಸಮಿತಿಯ ಇಬ್ಬರು ಸದಸ್ಯರು ತಮ್ಮ ಕಾರ್ಯವ್ಯಾಪ್ತಿ ಮೀರಿ ವರ್ತಿಸಿದ ಕಾರಣ ಅವರನ್ನು ಸಮಿತಿಯಿಂದ ಕೈಬಿಡಲಾಯಿತು~ ಎಂದು ತಿಳಿಸಿದರು.
`ಸಮಿತಿಯ ಸದಸ್ಯರಾಗಿದ್ದ ವೈ.ಬಿ. ರಾಮಕೃಷ್ಣ ಮತ್ತು ಟಿ.ವಿ. ರಾಮಚಂದ್ರ ಅವರು ವರದಿಯ ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲೇ ಮಾಧ್ಯಮಗಳಿಗೆ ತಿಳಿಸುತ್ತಿದ್ದರು. ಇವರನ್ನು ಹೊರತುಪಡಿಸಿ ಬೇರೆ ತಜ್ಞರನ್ನು ಸ್ವಾಮೀಜಿ ಸೂಚಿಸಿದರೆ ಅವರನ್ನೇ ನೇಮಕ ಮಾಡಲಾಗುವುದು~ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.