ಮುಂಬೈ (ಪಿಟಿಐ): ತಟಸ್ಥ ಸ್ಥಳಗಳಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಪಂದ್ಯಗಳನ್ನು ಆಯೋಜಿಸುವುದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಸಾರಥ್ಯದ ಬಿಸಿಸಿಐ ತಾಂತ್ರಿಕ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಬದಲಾಗಿ ಈಗ ಇರುವ ಮಾದರಿ ಯಲ್ಲೇ ಮುಂದುವರಿಸಲು ಒಲವು ತೋರಿದೆ.
`ಇವು ನಮ್ಮ ಶಿಫಾರಸು ಅಷ್ಟೆ. ಏಕೆಂದರೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಬಿಸಿಸಿಐಗಿದೆ. ಆದರೆ ಈಗಿರುವ ಪದ್ಧತಿಯನ್ನೇ ಮುಂದುವರಿಸಬೇಕು ಎಂಬುದು ನಮ್ಮ ಒಲವು~ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ತಾಂತ್ರಿಕ ಸಮಿತಿಯ ಪ್ರಮುಖ ಶಿಫಾರಸುಗಳು
ದೇಶಿ ಏಕದಿನ ಕ್ರಿಕೆಟ್ ಟೂರ್ನಿಗಳಲ್ಲಿ ಒಂದು ಓವರ್ನಲ್ಲಿ ಎರಡು ಶಾರ್ಟ್ ಪಿಚ್ ಎಸೆತ ಹಾಕಲು ಅವಕಾಶ. ಈ ಹಿಂದೆ ಕೇವಲ ಒಂದು ಶಾರ್ಟ್ ಪಿಚ್ ಎಸೆತ ಹಾಕಲು ಅನುಮತಿ ಇತ್ತು.
ರಣಜಿ ಪಂದ್ಯದ ವೇಳೆ ನಾಲ್ಕು ದಿನಗಳಲ್ಲಿ ಮೊದಲ ಇನಿಂಗ್ಸ್ ಆಧಾರದ ಮೇಲೆ ಫಲಿತಾಂಶ ಬರದಿದ್ದರೆ ಹೆಚ್ಚುವರಿ ಒಂದು ದಿನಕ್ಕೆ ವಿಸ್ತರಿಸಬಹುದು. ಆಗಲೂ ಮೊದಲ ಇನಿಂಗ್ಸ್ ಮುಗಿಯದಿದ್ದರೆ ಟಾಸ್ ಹಾಕುವ ಮೂಲಕ ಫಲಿತಾಂಶ ನಿರ್ಧಾರ.
ಆಕಸ್ಮಾತ್ ದೇಶಿ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಕಳಪೆ ಪಿಚ್ನಲ್ಲಿ ಆಯೋಜಿಸಿದರೆ ಆ ಋತುವಿನಲ್ಲಿ ಅಂತಹ ಆತಿಥೇಯ ಸಂಸ್ಥೆಯ ತಂಡದ 2 ಪಾಯಿಂಟ್ಗೆ ಕೊಕ್ಕೆ.
ಅಗತ್ಯವಿದ್ದರೆ ಟೆಸ್ಟ್ ಪಂದ್ಯಗಳ ವೇಳೆ ಫ್ಲಡ್ಲೈಟ್ಸ್ ಬಳಕೆ (ಸೌಲಭ್ಯ ಇರುವ ಸ್ಥಳಗಳಲ್ಲಿ).
ದುಲೀಪ್ ಟ್ರೋಫಿ ಬಳಿಕ ರಣಜಿ ಟ್ರೋಫಿ ಆಯೋಜನೆ.
ತಾಂತ್ರಿಕ ಸಮಿತಿ ಮಾಡಿರುವ ಈ ಎಲ್ಲಾ ಶಿಫಾರಸುಗಳಿಗೆ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯ ಅನುಮತಿ ಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಹಾಗೂ ತಾಂತ್ರಿಕ ಸಮಿತಿ ಸಮನ್ವಯಕ ಸಂಜಯ್ ಜಗದಾಳೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಟೂರ್ನಮೆಂಟ್ ಸಮಿತಿ ಕೂಡ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿತು.