ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿರುವ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಪಿಜಿಇಟಿ) ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ತನಿಖೆ ಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಕಾಶ ಕೋರಿದೆ.
ಕಳೆದ ಮೇ ತಿಂಗಳಿನಲ್ಲಿ ನಡೆದ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದ ವರದಿಯನ್ನು 2011ರ ಆಗಸ್ಟ್ 25ರ ಒಳಗೆ ಕೋರ್ಟ್ಗೆ ನೀಡುವಂತೆ ಕೋರ್ಟ್ ಮೇ ತಿಂಗಳಿನಲ್ಲಿ ಆದೇಶಿಸಿತ್ತು. ಆದರೆ ಈ ಅವಧಿಯಲ್ಲಿ ತನಿಖೆ ಮುಗಿಸುವುದು ಕಷ್ಟ ಎಂದಿರುವ ಸಿಬಿಐ, ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದೆ.
ಕುಮಾರಸ್ವಾಮಿ ಅರ್ಜಿ: ವಿಚಾರಣೆ ಮುಂದಕ್ಕೆ
ಲೋಕಾಯುಕ್ತ ವಿಶೇಷ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿತು.
ಇವರ ವಿರುದ್ಧ ದೂರು ದಾಖಲು ಮಾಡಿರುವ ವಕೀಲ ವಿನೋದ್ಕುಮಾರ್ ಅವರ ಬಗ್ಗೆ ನ್ಯಾಯಮೂರ್ತಿ ಬಿ.ವಿ.ಪಿಂಟೊ ಮಾಹಿತಿ ಬಯಸಿದ್ದಾರೆ. ಕಾರಣ, ಈ ಅರ್ಜಿಯ ವಿಚಾರಣೆಯನ್ನು ಈಗ ಈ ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ನ್ಯಾಯಮೂರ್ತಿಗಳು ವಕೀಲರಾಗಿದ್ದ ವೇಳೆ ವಿನೋದ್ಕುಮಾರ್ ಎನ್ನುವವರು ಅವರಲ್ಲಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಇವರು ಅವರೇ ಆಗಿದ್ದಲ್ಲಿ ವಿಚಾರಣೆಯನ್ನು ತಾವು ನಡೆಸುವುದು ಸೂಕ್ತ ಅಲ್ಲ ಎಂದ ನ್ಯಾಯಮೂರ್ತಿಗಳು ಈ ಕುರಿತು ಮಾಹಿತಿ ಬಯಸಿದ್ದಾರೆ.