ಅಡಿಲೇಡ್: ಭಾರತ ತಂಡವು ಗುರಿಯನ್ನು ಬೆನ್ನಟ್ಟಿದಾಗ ಮೂವತ್ತನೇ ಓವರ್ನಲ್ಲಿ ಒಂದು ಎಸೆತ ಇನ್ನೂ ಬಾಕಿ ಇದ್ದಾಗಲೇ ಅಂಪೈರ್ ಓವರ್ ಪೂರ್ಣವೆಂದು ಪ್ರಕಟಿಸಿದ್ದು `ಮಹಿ~ ಪಡೆಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ. ಆದರೆ ನಾಯಕ ಮಹೇಂದ್ರ ಸಿಂಗ್ ದೋನಿ ಇದಕ್ಕಾಗಿ ದೂರುವ ಮೂಲಕ ವಿವಾದಕ್ಕೆ ಅವಕಾಶ ನೀಡಲು ಸಿದ್ಧರಿಲ್ಲ. ಪಂದ್ಯ ನಂತರವೂ ಅವರು ಕ್ಷೇತ್ರದ ಅಂಪೈರ್ ಮಾಡಿದ ತಪ್ಪಿಗೆ ಕೋಪಗೊಳ್ಳಲಿಲ್ಲ. ಟೀಕೆ ಮಾಡುವ ಗೋಜಿಗೂ ಹೋಗಲಿಲ್ಲ.
30ನೇ ಓವರ್ನಲ್ಲಿ ಲಸಿತ್ ಮಾಲಿಂಗ ಬೌಲಿಂಗ್ ಮಾಡಿದ್ದರು. ಗಮನಿಸಬೇಕಾದ ಅಂಶವೆಂದರೆ ಆ ಐದು ಬೌಲ್ ಓವರ್ನಲ್ಲಿ ಪ್ರತಿಯೊಂದು ಎಸೆತಕ್ಕೂ ಭಾರತದವರು ರನ್ ಗಳಿಸಿದ್ದರು. ಕ್ರಮವಾಗಿ 1, 4, 1, 2, 1 ರನ್ಗಳು ಬಂದಿದ್ದವು. ಇನ್ನೊಂದು ಎಸೆತ ಸಾಧ್ಯವಾಗಿ ಕನಿಷ್ಠ ಇನ್ನೊಂದು ರನ್ ಬಂದಿದ್ದರೂ ಕೊನೆಯಲ್ಲಿ ಭಾರತವು ರೋಚಕ ಗೆಲುವು ಸಾಧ್ಯವಾಗುತಿತ್ತು. ಆದರೆ ಕ್ಷೇತ್ರದಲ್ಲಿದ್ದ ಅಂಪೈರ್ಗಳು ಲೆಕ್ಕಾಚಾರ ತಪ್ಪಿ ಒಂದು ಬೌಲ್ ಕೊರತೆ ಆಗುವಂತೆ ಮಾಡಿದರು.
ಆದರೆ ಈ ಪ್ರಮಾದಕ್ಕೆ ದೋನಿ ದೂರುವುದು ಕ್ಷೇತ್ರದಲ್ಲಿದ್ದ ಅಂಪೈರ್ಗಳಾದ ಇಂಗ್ಲೆಂಡ್ನ ನೈಜಿಲ್ ಲಾಂಗ್ ಹಾಗೂ ಆಸ್ಟ್ರೇಲಿಯಾದ ಸೈಮನ್ ಡಗ್ಲಸ್ ಅವರನ್ನಲ್ಲ. ಬದಲಿಗೆ ಮೂರನೇ ಅಂಪೈರ್ ಆಗಿದ್ದ ಆತಿಥೇಯ ದೇಶದ ಬ್ರೂಸ್ ಆಕ್ಸೆನ್ಫೋರ್ಡ್ ಅವರನ್ನು. `ಕ್ಷೇತ್ರದಲ್ಲಿದ್ದಾಗ ತೀರ್ಪುಗಾರರಿಂದ ಇಂಥ ತಪ್ಪುಗಳು ಆಗಬಹುದು. ಆದರೆ ಮೂರನೇ ಅಂಪೈರ್ ಸರಿಯಾಗಿ ಜವಾಬ್ದಾರಿ ನಿಭಾಯಿಸಿ, ಒಂದು ಎಸೆತ ಕಡಿಮೆ ಆಗಿದೆ ಎಂದು ತಕ್ಷಣ ಸೂಚನೆ ನೀಡಬಹುದಿತ್ತು~ ಎನ್ನುವುದು ದೋನಿ ಅಭಿಪ್ರಾಯ.
ವಾಕಿ-ಟಾಕಿಯಂಥ ತಂತ್ರಜ್ಞಾನದ ನೆರವು ಇರುವಾಗ ತಕ್ಷಣವೇ ಮೂರನೇ ಅಂಪೈರ್ ಈ ಕುರಿತು ಸೂಚನೆ ನೀಡುವುದಕ್ಕೆ ಅವಕಾಶವಿದೆ. ಆದರೆ ಆಕ್ಸೆನ್ಫೋರ್ಡ್ ಅತ್ತ ತಮ್ಮ ಗಮನ ಹರಿಸದಿದ್ದ ಕಾರಣ ಪ್ರಮಾದ ನಡೆದು ಹೋಯಿತು. ರೋಚಕ ಘಟ್ಟದಲ್ಲಿ ಪಂದ್ಯ `ಟೈ~ ಆಗುವ ಬದಲು ಭಾರತವು ಜಯಿಸುವುದಕ್ಕೂ ಆ ಒಂದು ಎಸೆತ ಕಾರಣ ಆಗಬಹುದಿತ್ತು ಎನ್ನುವ ವಿಶ್ಲೇಷಣೆಯನ್ನು ಕ್ರಿಕೆಟ್ ಪಂಡಿತರೂ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.