ಕಂಪ್ಲಿ: ಕಂಪ್ಲಿ ಕೋಟೆ ಚೆಕ್ ಪೋಸ್ಟ್ ಬಳಿ ರಾಜ್ಯ ಹೆದ್ದಾರಿ-29ರಲ್ಲಿ ಸಾರಿಗೆ ಸಂಸ್ಥೆ ಬಸ್ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಿಡಕ್ಕೆ ಆಸರೆಯಾಗಿ ನಿಂತಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಸಪೇಟೆಯಿಂದ ರಾಯಚೂರಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಎದುರಿಗೆ ಬರುವ ಟಾಟಾ ಟಂ ಟಂ ಗಾಡಿಗೆ ಸೈಡ್ ಕೊಡುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಬಸ್ ರಸ್ತೆ ಪಕ್ಕದ ಮಡಿ ಕಾಲುವೆಯತ್ತ ನುಸುಳಿ ಪಕ್ಕದಲ್ಲಿದ್ದ ನೇರಳೆ ಮರಕ್ಕೆ ಆಸರೆಯಾಗಿ ನಿಂತಿದೆ. ಇದರಿಂದ ಬಸ್ನಲ್ಲಿದ್ದ 21 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಟೆ ಚೆಕ್ ಪೋಸ್ಟ್ ಬಳಿಯ ಮೂನ್ಲೈಟ್ ಗಾರ್ಡನ್ ರೆಸ್ಟೋ ರೆಂಟ್ ಎದುರಿನ ರಾಜ್ಯ ಹೆದ್ದಾರಿ ಯನ್ನು ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿಗಾಗಿ ಹಲವಾರು ದಿನ ಗಳ ಹಿಂದೆ ಅಗೆಯಲಾಗಿದೆ. ಇದನ್ನು ದುರಸ್ತಿ ಮಾಡಲು ಕೈಗೆತ್ತಿಕೊಂಡ ಪುರಸಭೆ ವಿನಾಕಾರಣ ವಿಳಂಬ ಮಾಡುತ್ತಿರುವುದರಿಂದ ಈ ರೀತಿಯ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ಕೋಟೆ ನಿವಾಸಿ ಬಾಗಲಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಹೆದ್ದಾರಿಯಲ್ಲಿ ಪೈಪ್ಲೈನ್ ದುರಸ್ತಿಗಾಗಿ ಅಗೆದಿರುವ ಕಂದಕ ವನ್ನು ಸರಿಪಡಿಸದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.