ಎಚ್.ಡಿ.ಕೋಟೆ: ಪಟ್ಟಣದ 1ನೇ ಮುಖ್ಯ ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ಉಗಾಂಡ ದೇಶದ ಟೀಕ್ಮರವೊಂದು ಕೊಡಲಿ ಪೆಟ್ಟಿನಿಂದ ಬಚಾವ್ ಆಗಿದೆ.
ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಮಾಡಲು ಕೊಂಚ ಅಡ್ಡವಾಗಿದ್ದ ಈ ಮರ ಉಳಿಸುವ ಬಗ್ಗೆ ಕಾಳಜಿಗಿಂತ ಕತ್ತರಿಸಲು ಒತ್ತಡ ತಂದವರೆ ಹೆಚ್ಚು. ಗುತ್ತಿಗೆದಾರರು ಈ ಮರದ ಬೇರು ಕತ್ತರಿಸದೆ ಅದರ ಕೆಳಭಾಗದಲ್ಲಿ ಅಗೆದು ಬುದ್ದಿವಂತಿಕೆಯ ಜಾಗರೂಕ ಕೆಲಸದಿಂದಾಗಿ ಈ ಮರ ಬಜಾವಾಗಿದೆ.
ಇಂತಹ ಮರವನ್ನು ಬೆಳೆಸಲು ಬಹಳಷ್ಟು ವರ್ಷಗಳು ಬೇಕಾಗುತ್ತದೆ, ಪರಿಸರ ಉಳಿಸುವ ಕಾಳಜಿ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ.
ಈ ಮರವು ಉಗಾಂಡ ದೇಶದ ತಳಿಯಾಗಿದ್ದು , ಇಂತಹ ಮರ ನಮ್ಮ ರಾಜ್ಯದಲ್ಲಿ ಎಲ್ಲೂ ಕಾಣಸಿಗುವುದಿಲ್ಲ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ಕುಮಾರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮರವನ್ನು ರಸ್ತೆ ಅಗಲೀಕರಣ ನೆಪದಲ್ಲಿ ಕಡಿಮೆ ಬೆಲೆಗೆ ಹರಾಜು ಮಾಡಿಸಿ ತಮ್ಮದಾಗಿಸಿಕೊಳ್ಳುವಲ್ಲಿ ಕೆಲ ಮುಖಂಡರಿಗೆ ಹಿನ್ನಡೆಯಾಯಿತು. ಇಂತಹ ಮರವನ್ನು ಉಳಿಸುವಲ್ಲಿ ಚಾಣಾಕ್ಷತನ ಮೆರೆದ ಗುತ್ತಿಗೆದಾರ ಮತ್ತು ಅರಣ್ಯ ಇಲಾಖೆಯವರಿಗೆ ಪಟ್ಟಣದ ನಾಗರಿಕರು ಮೆಚ್ಚುಗೆ ಸೂಚಿಸಿದರು.
ರಾಜ್ಯದ ಯಾವ ಮೂಲೆಯಲ್ಲೂ ಕಾಣಸಿಗದ ಇಂತಹ ಮರವನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ಪಡೆಯಬೇಕು ಎನ್ನುವ ಸ್ಥಳೀಯರ ಉದ್ದೇಶ ಕೈಗೂಡಿತು.
ಯಾವುದೇ ಮರ ಕತ್ತರಿಸುವ ಮೊದಲು ಅದನ್ನು ಉಳಿಸಲು ಇರುವ ಮಾರ್ಗವನ್ನು ಹುಡುಕಿದರೆ ಅಭಿವೃದ್ಧಿ ಸಂದರ್ಭದಲ್ಲಿ ನೆಲಕ್ಕುರುಳುವ ಎಷ್ಟೋ ಮರಗಳು ಉಳಿದುಕೊಳ್ಳುತ್ತವೆ ಎನ್ನುವುದು ಪಟ್ಟಣದ ಪರಿಸರ ಪ್ರೇಮಿಗಳ ಒತ್ತಾಯ.