ಕೊಲಂಬೊ (ಪಿಟಿಐ): ತಮಿಳರ ಸಮಸ್ಯೆಗಳ ನಿವಾರಣೆಗೆ ಬೇರೆ ದೇಶಗಳತ್ತ ನೋಡುವ ಬದಲು ದೇಶದೊಳಗೇ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ಪ್ರಮುಖ ತಮಿಳು ಪಕ್ಷಗಳ ನಾಯಕರಿಗೆ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಮನವಿ ಮಾಡಿದ್ದಾರೆ.
‘ಶಾಂತಿ ಮತ್ತು ಸಾಮರಸ್ಯ ನಿರ್ವಹಣೆಗಾಗಿ ತಮ್ಮೊಂದಿಗೆ ಕೈಜೋಡಿಸುವಂತೆ ಟಿಎನ್ಎ ನಾಯಕ ಸಂಪತ್ತನ್ ಮತ್ತು ಉತ್ತರ ಪ್ರಾಂತ್ಯದ ಮುಖ್ಯಮಂತ್ರಿ ವಿಘ್ನೇಶ್ವರನ್ ಅವರನ್ನು ಕೇಳಿಕೊಳ್ಳುತ್ತೇನೆ’ ಎಂದು ಸಂಸತ್ತಿನಲ್ಲಿ ಶುಕ್ರವಾರ 2014ರ ಬಜೆಟ್ ಚರ್ಚೆಯ ಸಂದರ್ಭದಲ್ಲಿ ರಾಜಪಕ್ಸೆ ತಿಳಿಸಿದ್ದಾರೆ.
ಎಲ್ಲ ಸಮುದಾಯದವರೂ ಶಾಂತಿಯ ಜೊತೆ ಬರಬೇಕೇ ಹೊರತು ದ್ವೇಷದ ಜೊತೆಗಲ್ಲ. ಇದು ರಾಷ್ಟ್ರೀಯ ಸಾಮರಸ್ಯಕ್ಕಾಗಿ ನಮ್ಮ ಬದ್ಧತೆಯನ್ನು ತೋರಿಸುವ ಸಮಯ’ ಎಂದು ಅವರು ಹೇಳಿದ್ದಾರೆ.
‘ನಾವು ಬೇರೆಯವರಿಗೆ ಮಾದರಿಯಾಗುವ ರೀತಿ ಪರಿಹಾರವನ್ನು ಕಂಡುಕೊಳ್ಳಬೇಕು. ಮುಂದಿನ ಜನಾಂಗದ ದೃಷ್ಟಿಯಿಂದ ಇದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.