ಕೊಲಂಬೊ (ಪಿಟಿಐ): ಈ ಹಿಂದೆ ಎಲ್ಟಿಟಿಇ ಬಿಗಿಹಿಡಿತದಲ್ಲಿದ್ದ ಜಾಫ್ನಾದಲ್ಲಿ ತಮಿಳು ಭಾಷೆಯ ದಿನ ಪತ್ರಿಕೆಯೊಂದರ ಕಚೇರಿ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿದ ಶಸ್ತ್ರಧಾರಿಗಳು, ಬೆಂಕಿ ಹಚ್ಚಿದ್ದಾರೆ.
ಬೆಳಿಗ್ಗೆ 5 ಗಂಟೆಗೆ `ಉದಯನ್' ದಿನ ಪತ್ರಿಕೆಯ ಕಚೇರಿಗೆ ನುಗಿದ್ದ ಇಬ್ಬರು ಶಸ್ತ್ರಧಾರಿಗಳು, ಪತ್ರಿಕೆಯ ಬಂಡಲ್ಗಳಿಗೆ ಬೆಂಕಿ ಹಚ್ಚಿ, ಮುದ್ರಣ ಯಂತ್ರದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
`ಕಳೆದ ವಾರ ನಮ್ಮ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಗೆ ಭದ್ರತೆ ನೀಡುವಂತೆ ಪೊಲೀಸರನ್ನು ಕೋರಿದ್ದೆವು' ಎಂದು ಪತ್ರಿಕೆಯ ಮಾಲೀಕ ಇ. ಶರವಣ ಪವನ್ ಹೇಳಿದ್ದಾರೆ.
ಶ್ರೀಲಂಕಾದ ಉತ್ತರದ ಭಾಗದ ಕಿಲಿನೊಚಿಯಲ್ಲಿರುವ `ಉದಯನ್' ವಿತರಣಾ ಕಚೇರಿ ಮೇಲೆ ಏಪ್ರಿಲ್ 3ರಂದು ಕೂಡ ದಾಳಿ ನಡೆದಿತ್ತು.