ಬಸವನಬಾಗೇವಾಡಿ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯಲ್ಲಿ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮಹಾ ದೇವಪ್ಪ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪು ಗಬ್ಬೂರ ಮಾತನಾಡಿ, ಕಾವೇರಿ ನದಿ ನೀರು ತಮಿಳುನಾಡಿಗೆ ಬಿಟ್ಟಿರುವ ಕ್ರಮವನ್ನು ಸಂಘಟನೆ ಖಂಡಿಸುತ್ತದೆ. ಕಾವೇರಿ ನೀರು ಬಿಡುವುದನ್ನು ತಕ್ಷಣವೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬರಗಾಲ ಬಿದ್ದಿರುವುದರಿಂದ ರಾಜ್ಯದ ರೈತರು ತೊಂದರೆ ಅನುಭವಿ ಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಗೆ ನೀರು ಬಿಡುವುದು ಸರಿಯಲ್ಲ. ಶೀಘ್ರವೇ ಕಾವೇರಿ ನೀರು ಬಿಡುವುದನ್ನು ನಿಲ್ಲಿಸದೇ ಹೋದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಂಜು ಗಬ್ಬೂರ, ದಾದಾಗೌಡ ಬಿರಾದಾರ, ಪ್ರವೀಣ ಚಿಕ್ಕೊಂಡ, ಬಿ.ಬಿ.ಇಂಗಳಗಿ, ಪರಶು ರಾಮ ಗಂಜಾಳ, ಬಸು ಕಂಚ್ಯಾಣಿ, ಸುರೇಶ ರಾಯಗೊಂಡ, ಶಂಕರಗೌಡ ಪಾಟೀಲ, ಶಾಂತಗೌಡ ಸಾಸನೂರ, ವಿಕಾಸ ಜೋಗಿ, ಸಿದ್ಧನಗೌಡ ಪಾಟೀಲ, ಶರಣು ಹೂಗಾರ ಮುಂತಾದವರು ಭಾಗವಹಿಸಿದ್ದರು.