ಚೆನ್ನೈ: ರಾಜ್ಯದಾದ್ಯಂತ ಹರಡುತ್ತಿರುವ `ಡೆಂಗೆ~ ಜ್ವರದ ನಿರ್ಮೂಲನೆಗಾಗಿ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಇಲ್ಲಿಯವರೆವಿಗೂ 59 ಡೆಂಗೆ ಪ್ರಕರಣಗಳು ಪತ್ತೆಯಾಗಿದ್ದು, ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಜಯಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ `ರಾಜ್ಯದಲ್ಲಿ ಡೆಂಗೆ ಜ್ವರದ ಸ್ಥಿತಿ ಮತ್ತು ನಿಯಂತ್ರಣ ಕ್ರಮಗಳ~ ಪ್ರಗತಿ ಪರಿಶೀಲನಾ ಸಭೆಯ ನಂತರ ಅಧಿಕಾರಿಗಳು ಈ ಮಾಹಿತಿ ನೀಡಿದರು. ಇಲ್ಲಿಯವರೆವಿಗೆ ಡೆಂಗೆ ಜ್ವರದಿಂದ ಬಳಲುತ್ತಿದ್ದ 400 ಜನರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಆದರೆ `ವಿವಿಧ ಅಂಗಾಂಗಳ ನ್ಯೂನತೆಯಿಂದ ಸಾವನ್ನಪ್ಪಿದ ಪ್ರಕರಣಗಳನ್ನೂ ಡೆಂಗೆ ಜ್ವರದ ಸಾವಿನ ಪ್ರಕರಣವೆಂದು ಕೆಲವೊಂದು ಮಾಧ್ಯಮಗಳು ಬಿತ್ತರಿಸುತ್ತಿವೆ. ಇದೊಂದು ಆಧಾರ ರಹಿತ ಸುದ್ದಿ~ ಎಂದು ಹೇಳಿದರು.