ಚೆನ್ನೈ (ಐಎಎನ್ಎಸ್): ಬಿಹಾರದ ಸರನ್ ಜಿಲ್ಲೆಯ ಬಿಸಿಯೂಟ ದುರಂತ ಇನ್ನೂ ಕಣ್ಣಮುಂದೆಯೆ ಇರುವಾಗ ತಮಿಳುನಾಡಿನಲ್ಲೂ ಇಂತಹುದೆ ಘಟನೆ ಗುರುವಾರ ನಡೆದಿದೆ.
ರಾಜ್ಯದ ಕಡಲೂರು ಜಿಲ್ಲೆಯ ನೈವೇಲಿ ಎನ್ಎಲ್ಸಿ ಬಾಲಕಿಯರ ಶಾಲೆಯ 155 ವಿದ್ಯಾರ್ಥಿನಿಯರು ಬಿಸಿಯೂಟದ ನಂತರ ಅಸ್ವಸ್ಥಗೊಂಡಿದ್ದು, ಈ ಪೈಕಿ 13 ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಕ್ಕಳ ಸ್ಥಿತಿ ಸ್ಥಿರವಾಗಿದ್ದು ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಮಾಡುವ ಸಾಧ್ಯತೆ ಇದೆ ಎಂದು ಕಡಲೂರು ಜಿಲ್ಲಾಧಿಕಾರಿ ಕೆ. ಕಿರ್ಲೋಶ್ ಕುಮಾರ್ ತಿಳಿಸಿದರು.
ಘಟನೆಗೆ ವಿಷಾಹಾರ ಸೇವನೆ ಕಾರಣ ಎನ್ನಲಾಗಿದ್ದು, ನೀಡಲಾದ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಘಟನೆ ತಿಳಿಯುತ್ತಲೇ ಆತಂಕಗೊಂಡ ನೂರಾರು ಪಾಲಕರು ಶಾಲೆಯ ಆವರಣದಲ್ಲಿ ಜಮಾಯಿಸಿದ್ದರಿಂದ ಕೆಲಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.