ಚೆನ್ನೈ (ಪಿಟಿಐ): ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಶಾಸಕ ಪಿ.ಧನಪಾಲ್ ಅವರು ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿ ಬುಧವಾರ ಆಯ್ಕೆಯಾಗಿದ್ದಾರೆ.ತಮಿಳುನಾಡು ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ಈ ಸ್ಥಾನ ಅಲಂಕರಿಸಿದ ಪ್ರಥಮ ದಲಿತ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಹಂಗಾಮಿ ಸ್ಪೀಕರ್ ಸಿ.ಕೆ. ತಮಿಳ್ ಅರಸನ್ ಅವರು ಧನಪಾಲ್ ಅವರ ಆಯ್ಕೆಯನ್ನು ಘೋಷಿಸುತ್ತಿದ್ದಂತೆ ಎಐಎಡಿಎಂಕೆ ಪಕ್ಷದ ಸದಸ್ಯರು ಮೇಜುತಟ್ಟಿ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದರು.
ಅವಿರೋಧವಾಗಿ ಆಯ್ಕೆಯಾದ 61 ವರ್ಷದ ಧನಪಾಲ್ ಅವರನ್ನು ಮುಖ್ಯಮಂತ್ರಿ ಜೆ.ಜಯಲಲಿತಾ ನೇತೃತ್ವದಲ್ಲಿ ಎಲ್ಲಾ ಶಾಸಕರು ಅಭಿನಂದಿಸಿದರು.
ನಾಲ್ಕು ಬಾರಿ ಶಾಸಕರಾಗಿರುವ ಧನಪಾಲ್, 2001-06ರ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1946-55ರಲ್ಲಿ ಮದ್ರಾಸ್ ರಾಜ್ಯದಲ್ಲಿ ದಲಿತರಾದ ಜೆ.ಶಿವಷಣ್ಮುಗಂ ಪಿಳ್ಳೆ ಅವರು ಸ್ವೀಕರ್ ಆಗಿ ಕಾರ್ಯನಿರ್ವಹಿಸಿದ್ದರು.