ಈರುಳ್ಳಿ ಕತ್ತರಿಸುವ ಕರ್ಮ ಯಾರಿಗೆ ಬೇಕಪ್ಪ. ಆ ಬೆಳ್ಳುಳ್ಳಿ ಬಿಡಸೋವಷ್ಟರಲ್ಲಿ ಉಗುರುಗಳೆಲ್ಲಾ ಸೋತು ಹೋಗ್ತವೆ ಎಂದು ಮಹಿಳೆಯರು ಇನ್ಮುಂದೆ ಗೊಣಗಾಡ ಬೇಕಿಲ್ಲ.
ಯಾಕಂದ್ರೆ ಈಗ ರಾಜಾಜಿನಗರದಲ್ಲಿರುವ ಬಿಗ್ ಬಜಾರ್ ಫ್ಯಾಮಿಲಿ ಸೆಂಟರ್ನಲ್ಲಿ ತರಕಾರಿ ಕೊಂಡರೆ ಆ ಕಷ್ಟವೇ ಇಲ್ಲ. ನೀವು ಇಲ್ಲಿ ಈರುಳ್ಳಿ, ಟಮೊಟೊ, ಮೂಲಂಗಿ, ಮೆಣಸಿನಕಾಯಿ, ಸೊಪ್ಪು ಹೀಗೆ ಯಾವುದೇ ತರಕಾರಿ ಕೊಂಡರೂ ಕೂಡ ಅದನ್ನು ಅಲ್ಲಿಯೇ ಕತ್ತರಿಸಿಕೊಡುತ್ತಾರೆ.
ನಿಮಗೆ ಯಾವ ಸೈಜ್ನಲ್ಲಿ ಬೇಕೋ ಆ ಅಳತೆಯಲ್ಲಿಯೇ ಕತ್ತರಿಸಿಕೊಡುವುದು ಇದರ ಮತ್ತೊಂದು ವಿಶೇಷತೆ. ತೆಂಗಿನಕಾಯಿ ಕೊಂಡರೇ ಅದನ್ನು ಅಲ್ಲಿಯೇ ತುರಿದು ಕೊಡುತ್ತಾರೆ.
ಬಿಗ್ಬಜಾರ್ ಇದನ್ನು ಭಾರತೀಯ ಪರಂಪರೆಯಲ್ಲಿ ಬರುವ ಅತಿಥಿ ದೇವೋ ಭವ ಎಂಬ ಪರಿಕಲ್ಪನೆಯನ್ನು ಇರಿಸಿಕೊಂಡು ಈ ಕಾರ್ಯಕ್ಕೆ ಚಾಲನೆ ನೀಡಿದೆ. ನಿಮ್ಮ ಸೇವೆಯಲ್ಲಿ ಎಂಬುದು ಬಿಗ್ ಬಜಾರ್ನ ಈಗಿನ ಮಂತ್ರ.
ಇದು ಕೇವಲ ಔದ್ಯೋಗಿಕ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಸಿದ್ಧ ಪಡಿಸಿದ ಯೋಜನೆಯಲ್ಲ. ಬಹುತೇಕ ಅವಿವಾಹಿತರು, ಸ್ವನಳಪಾಕದಲ್ಲಿ ತೊಡಗಿಸಿಕೊಳ್ಳುವ, ಉದ್ಯೋಗದ ಅನಿವಾರ್ಯದಿಂದ ಮನೆಯಿಂದ ದೂರವಿರುವ ಪುರಷರಿಗೂ ಇದು ಅನುಕೂಲ ಮಾಡಿಕೊಡುತ್ತದೆ.
ಇಲ್ಲಿ ಚಪಾತಿ ಹಿಟ್ಟನ್ನು ಕೊಂಡರೆ ಅದನ್ನು ಅಲ್ಲಿಯೇ ನಾದಿ,ರೋಟಿ ಮಾಡಿ ಕೊಡ್ತಾರೆ. ಮತ್ತೆ ಇನ್ನೊಂದು ವಿಶೇಷತೆ ಅಂದರೆ 5 ಕಿಲೋಗಿಂತ ಹೆಚ್ಚಿನ ಗೋಧಿ ಕೊಂಡರೆ ಅದನ್ನು ಉಚಿತವಾಗಿ ಮಿಲ್ ಮಾಡಿಕೊಡ್ತಾರೆ.
ನೀವು ಮಾಲ್ ಸುತ್ತಾಡುತ್ತಾ ಮನೆಯ ಇನ್ನಿತರ ಸಾಮಾನುಗಳನ್ನು ಕೊಳ್ಳುವಷ್ಟರಲ್ಲಿ ನಿಮ್ಮ ರೋಟಿ ರೆಡಿ. ಇದೆಲ್ಲಾ ಕೇವಲ 12 ನಿಮಿಷದಲ್ಲಿ ಮಾತ್ರ. ಅಥವಾ ನೀವು ನಿಮ್ಮ ಮನೆಯಲ್ಲಿಯೇ ಚಪಾತಿ ಮಾಡಿಕೊಳ್ಳುವ ಇಷ್ಟ ಇದ್ದರೆ ಅಲ್ಲಿ ನಾದಿದ ಚಪಾತಿ ಹಿಟ್ಟು ಕೂಡ ಸಿಗುತ್ತದೆ. ರಾಯಿ ಹಾಗೂ ಟೊಮೊಟೊ ಚಟ್ನಿ ಕೂಡ ಲಭ್ಯವಿದೆ.
ಇನ್ನು ನಿಮಗೆ ಇಲ್ಲಿ ತರಹೇವಾರಿ ರುಚಿಯ ಅಕ್ಕಿ ದೊರಕುತ್ತದೆ. ಅಲ್ಲಿರುವ ಅಕ್ಕಿಯನ್ನು ಕೊಳ್ಳುವ ಮುನ್ನ ಗ್ರಾಹಕರು ಅಕ್ಕಿಯನ್ನು ಅಲ್ಲಿಯೇ ಬೇಯಿಸಿ ಅದರ ರುಚಿಯನ್ನು ನೋಡಬಹುದು.
ಅಥವಾ ಅಲ್ಲಿ ರುಚಿ ನೋಡುವ ಮನಸ್ಸಿಲ್ಲದಿದ್ದರೇ ಅಕ್ಕಿಯನ್ನು ಮನೆಗೆ ತಂದು ಅದರ ರುಚಿ ನೋಡಬಹುದು. ಇಷ್ಟವಾದರೆ ಮಾತ್ರ ಕೊಂಡುಕೊಳ್ಳಬಹುದು. ಒಂದು ವೇಳೆ ಇಷ್ಟವಾಗದಿದ್ದರೆ ಬೇರೆಯದನ್ನು ಟ್ರೈ ಮಾಡಬಹುದು ಎನ್ನುತ್ತಾರೆ ಬಿಗ್ ಬಜಾರ್ ವ್ಯವಸ್ಥಾಪಕ ವೆಂಕಟೇಶ್ವರ ಕುಮಾರ್.
ಸಾಧ್ಯವಿದ್ದಷ್ಟೂ ಅಡುಗೆಯನ್ನು ಸರಳಗೊಳಿಸುವುದು, ಮನೆಯೂಟವನ್ನು ಜನಪ್ರಿಯಗೊಳಿಸುವುದು ನಮ್ಮ ಪ್ರಯತ್ನ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.