ಮೊಳಕಾಲ್ಮುರು: ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸುವ ತರಬೇತಿ ಕಾರ್ಯಾಗಾರಗಳನ್ನು ಶಿಕ್ಷಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಮನ್ವಯ ಶಿಕ್ಷಣಾಧಿಕಾರಿ ನಯೀಮುರ್ ರೆಹಮಾನ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪದನಿಮಿತ್ತ ಯೋಜನಾಧಿಕಾರಿ ಕಚೇರಿ ಸಂಯುಕ್ತವಾಗಿ ಇಲ್ಲಿನ ದೀಪಿಕಾ ವಿದ್ಯಾಸಂಸ್ಥೆ ಆವರಣದಲ್ಲಿ ಶುಕ್ರವಾರ ಶಿಕ್ಷಕರಿಗೆ ಹಮ್ಮಿಕೊಂಡಿದ್ದ 5 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಹಂತ, ಹಂತವಾಗಿ ಬದಲಾಗುವ ಶಿಕ್ಷಣ ಪದ್ಧತಿಗಳನ್ನು ಸಮರ್ಪಕವಾಗಿ ಅರಿತು ಬೋಧನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನೂತನ ಕಾರ್ಯಕ್ರಮಗಳನ್ನು ಇಲಾಖೆ ಜಾರಿಗೆ ತಂದಿದೆ. ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಶಿಕ್ಷಣ ಹಕ್ಕು ಹಾಗೂ ರಾಷ್ಟ್ರೀಯ ಪಠ್ಯಪುಸ್ತಕ ತರಬೇತಿ ಬಗ್ಗೆ ಇಲಾಖೆ ಶಿಕ್ಷಕರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು ನೀಡಿದೆ. ಅದನ್ನು ಸಮುದಾಯ ಹಾಗೂ ಶಿಕ್ಷಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ಎಲ್. ಪರಮೇಶ್ವರಪ್ಪ ಮಾತನಾಡಿದರು.
ಶಿಕ್ಷಣ ಸಂಯೋಜಕರಾದ ಎಲ್. ಪರಮೇಶ್ವರಪ್ಪ, ರುದ್ರಯ್ಯ, ಎಸ್ . ಬಿ. ರಾಮಚಂದ್ರಯ್ಯ, ಬಿಆರ್ಸಿ ಮಂಜುನಾಥ್, ಸಿಆರ್ಪಿಗಳಾದ ಮಂಜುನಾಥ್, ವೆಂಕಟೇಶ್, ಚಂದ್ರಣ್ಣ ಉಪಸ್ಥಿತರಿದ್ದರು.