ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ತರಳಬಾಳು ಬೃಹನ್ಮಠದ ವತಿಯಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬ `ತರಳಬಾಳು ಹುಣ್ಣಿಮೆ ಮಹೋತ್ಸವ' ಈ ಬಾರಿ ಸಿರಿಗೆರೆಯಲ್ಲಿ ಫೆ. 23ರಿಂದ 25ರವರೆಗೆ ನಡೆಯಲಿದೆ.
ಕಳೆದ ಬಾರಿ ಕಡೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಕೊನೇ ದಿನದಂದು ಪ್ರಕಟಿಸಿದಂತೆ ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಡೆಯಬೇಕಿದ್ದ ಮಹೋತ್ಸವವನ್ನು ಉತ್ತರ ಕರ್ನಾಟಕದ ಕೆಲವು ಭಾಗ ಬರಗಾಲಕ್ಕೆ ತುತ್ತಾಗಿರುವುದರಿಂದ ರದ್ದುಗೊಳಿಸಿ, ಸಿರಿಗೆರೆಯಲ್ಲಿ ತರಳಬಾಳು ಬೃಹನ್ಮಠದ ಆಶ್ರಯದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ಫೆ. 23ರಿಂದ ಪ್ರತಿದಿನ ಸಂಜೆ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ನಾಡಿನ ಪ್ರಸಿದ್ಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಫೆ. 25ರ ಮಧ್ಯಾಹ್ನ 3ಕ್ಕೆ ಗ್ರಾಮದ ರಾಜಬೀದಿಗಳಲ್ಲಿ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವವನ್ನು ಬೃಹನ್ಮಠದ ಸಕಲ ಬಿರುದಾವಳಿಗಳು ಮತ್ತು ವಿವಿಧ ಜಾನಪದ ಕಲಾತಂಡಗಳೊಂದಿಗೆ ನೆರವೇರಿಸಲಾಗುವುದು.
ಅಂದು ಸಂಜೆ ಬೃಹನ್ಮಠದ ಐಕ್ಯ ಮಂಟಪದ ಆವರಣದಲ್ಲಿ ಬೃಹನ್ಮಠದ ಸಂಪ್ರದಾಯದಂತೆ ಶ್ರೀಗಳ ಸದ್ಧರ್ಮ ಸಿಂಹಾಸನಾರೋಹಣ ಇರುತ್ತದೆ ಎಂದು ಬೃಹನ್ಮಠದ ಮೂಲಗಳು ತಿಳಿಸಿವೆ.