ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ ತಾಲ್ಲೂಕಿನ ಗೋಪಾಲ, ಸಿದ್ಲಿಪುರಗಳಲ್ಲಿ ಮರಳು ಲೂಟಿ:ನಿಲ್ಲದ ಅಕ್ರಮ ಮರಳು ಸಾಗಾಣಿಕೆ

Last Updated 21 ಮೇ 2012, 6:30 IST
ಅಕ್ಷರ ಗಾತ್ರ

ತರೀಕೆರೆ: ತಾಲ್ಲೂಕು ಆಡಳಿತದ ಬಿಗಿ ಭದ್ರತೆಯ ನಡುವೆಯೂ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದೆ.ಲೋಕೋಪಯೋಗಿ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಅಕ್ರಮ ಮರಳು ಸಂಗ್ರಹಿಸುವ ತಾಲ್ಲೂಕಿನ ಗೋಪಾಲ ಮತ್ತು ಸಿದ್ಲಿಪುರ ಗ್ರಾಮಗಳಲ್ಲಿನ ಭದ್ರಾ ನದಿ ಪಾತ್ರದಲ್ಲಿ ದಾಳಿ ನಡೆಸಿ 150ಕ್ಕೂ ಹೆಚ್ಚು ಉಕ್ಕಡ (ಸಣ್ಣ ಪ್ರಮಾಣದ ತೆಪ್ಪ)ಗಳನ್ನು ವಶಪಡಿಸಿಕೊಂಡು ನಾಶಪಡಿಸಿದೆ.

 ಐದಕ್ಕೂ ಹೆಚ್ಚು ಮರಳನ್ನು ಅಕ್ರಮವಾಗಿ ಸಾಗಿಸುವ ಟ್ರಾಕ್ಟರ್‌ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದರೂ ಈ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣಿಕೆ ನಿರಂತರ ವಾಗಿ ನಡೆಯುತ್ತಿದೆ.
ತಾಲ್ಲೂಕಿನ ಗೋಂದಿ ಚಾನಲ್, ಸಿದ್ಲಿಪುರ ಮತ್ತು ಗೋಪಾಲ ಗ್ರಾಮದ ಆಸುಪಾಸಿನಲ್ಲಿ ನದಿ ಪಾತ್ರ ಕಿರಿದಾಗಿದ್ದು, ಮರಳನ್ನು ಹೊರ ತೆಗೆಯಲು ಮಾನವ ಸಂಪನ್ಮೂಲ ಅತಿಯಾಗಿ ಬಳಕೆಯಾಗುತ್ತಿದೆ. ಇಲ್ಲಿನ ಜನತೆ ಜೀವದ ಹಂಗುತೊರೆದು 20ಕ್ಕೂ ಹೆಚ್ಚು ಅಡಿ ಆಳದಲ್ಲಿರುವ ನದಿ ನೀರಿನಲ್ಲಿ ಮುಳಗಿ ಮರಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ.

ನೀರಿನಲ್ಲಿ ಮುಳಗಿ ಮರಳನ್ನು ತೆಗೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಆದರೂ ಅಧಿಕ ವರಮಾನದ ಆಸೆಗೆ ಈ ಪ್ರದೇಶದ ಜನತೆ ಕೂಲಿ ಕೆಲಸ ಮಾಡು ವುದಕ್ಕೆ ತಿಲಾಂಜಲಿ ನೀಡಿ ಈ ಕೆಲಸವನ್ನು ಅವಲಂಬಿಸಿಕೊಂಡಿದ್ದಾರೆ.

ನದಿಯಲ್ಲಿ ಸಹಜವಾಗಿ ದೊರಕುವ ಮರಳನ್ನು ಸಾಗಾಣಿಕೆ ಮಾಡಲು ಟ್ರ್ಯಾಕ್ಟರ್ ಒಂದಕ್ಕೆ  ರೂ.1500 ಮತ್ತು ಒಂದು ಘನ ಮೀಟರ್‌ಗೆ ರೂ.350ರಂತೆ ತಾಲ್ಲೂಕು ಆಡಳಿತ ರಾಜಧನ ವಸೂಲು ಮಾಡುತ್ತಿದೆ. ಆದರೆ ಖಾಸಗಿಯಾಗಿ ಒಂದು ಟ್ರಾಕ್ಟರ್ ಮರಳಿಗೆ ರೂ.3ರಿಂದ 4 ಸಾವಿರ  ಪಡೆಯಲಾಗುತ್ತದೆ.

ತಹಶೀಲ್ದಾರ್ ನೇತೃತ್ವದಲ್ಲಿ ಲೋಕೋಪಯೋಗಿ, ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಕಾರ್ಯಪಡೆ ರಚಿಸಿದ್ದು, ಅಕ್ರಮ ಮರಳು ಸಂಗ್ರಹಣೆಗೆ ಹಗಲು ರಾತ್ರಿ ಶ್ರಮಿಸುತ್ತಿದ್ದು, ನೂರಾರು ಉಕ್ಕಡಗಳನ್ನು ಸುಟ್ಟು ಹಾಕಿದ್ದರೂ  ಮರಳು ದಂಧೆ ನಿಂತಿಲ್ಲ.

ಅಕ್ರಮ ಮರಳು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್‌ಗಳಿಗೆ ರೂ 1ಲಕ್ಷ ದಂಡ ವಿಧಿಸುವ ನಿರ್ಧಾರವನ್ನು ತಾಲ್ಲೂಕು ಆಡಳಿತ ಮಾಡಿದ್ದು, ಮತ್ತು ಮರಳು ಸಾಗಾಣಿಕೆಯ ಸಮಯದಲ್ಲಿ ಈ ಪ್ರದೇಶದ ತಮ್ಮ ಹೊಲಗದ್ದೆಗಳಲ್ಲಿ ದಾರಿ ಮಾಡಿಕೊಟ್ಟಿರುವ ರೈತರಿಗೆ ಎಚ್ಚರಿಕೆ ನೀಡಿದ್ದು, ಈ ಕಾರಣವಾಗಿ ಮರಳು ಸಾಗಾಣಿಕೆ ಮಾಡುವುದನ್ನು ತಪ್ಪಿಸಬಹುದೆಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT