ಪಣಜಿ (ಪಿಟಿಐ): ಸಹೋದ್ಯೋಗಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಬಂಧಿತರಾಗಿರುವ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಪೋಲಿಸ್ ಲಾಕ್ಅಪ್ನಲ್ಲಿ ತನಗೆ ಫ್ಯಾನ್ ಒದಗಿಸಿಕೊಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಜೆಎಂಎಫ್ಸಿ ಕೋರ್ಟ್ ಬುಧವಾರ ವಜಾ ಮಾಡಿದೆ.
ಮತ್ತೆ ವೈದ್ಯಕೀಯ ಪರೀಕ್ಷೆ: ಈ ಮಧ್ಯೆ, ತೇಜ್ಪಾಲ್ ಅವರನ್ನು ಬುಧವಾರ ಮತ್ತೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ.
‘ತನಿಖೆಯ ಭಾಗವಾಗಿ ತೇಜ್ಪಾಲ್ ಅವರನ್ನು ಮತ್ತೆ ಕೆಲವು ಪರೀಕ್ಷೆಗಳಿಗಾಗಿ ಗುರಿಪಡಿಸಲಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತೇಜ್ಪಾಲ್ ಅವರನ್ನು ಸೋಮವಾರ ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಪುರುಷತ್ವ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ಪೊಲೀಸ್ ವಶದಲ್ಲಿರುವ ತೇಜ್ಪಾಲ್ ಅವರು, ಮಾನವೀಯನೆಲೆಯಲ್ಲಿ ತಮಗೆ ಫ್ಯಾನ್ ಒದಗಿಸಬೇಕು ಎಂದು ಕೋರಿ ಸೋಮವಾರ ಅರ್ಜಿ ಸಲ್ಲಿಸಿದ್ದರು.
ಭಗವದ್ಗೀತೆ ಉಡುಗೊರೆ: ತೇಜ್ಪಾಲ್ಗೆ ಶ್ರೀರಾಮಸೇನೆ ಬುಧವಾರ ಪವಿತ್ರ ಭಗವದ್ಗೀತೆಯ ಪ್ರತಿಯನ್ನು ಉಡುಗೊರೆಯಾಗಿ ನೀಡಿದೆ. ತರುಣ್ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ತರಲು ಹಾಗೂ ಆತನಿಗೆ ನೀತಿಯನ್ನು ಅರಿಯುವಲ್ಲಿ ಇದು ನೆರವಾಗಲಿದೆ. ಭಗವದ್ಗೀತೆ ಪ್ರತಿಯನ್ನು ತೇಜ್ಪಾಲ್ಗೆ ತಲುಪಿಸಲು ಜೈಲಿನ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸೇನೆಯ ಉಪಾಧ್ಯಕ್ಷ ಕುಮಾರ್ ಹಕೇರಿ ತಿಳಿಸಿದ್ದಾರೆ.
ಶೋಮಾ ಚೌಧರಿ ಸೇರಿ, ಇತರ ಮೂವರಿಗೆ ಸಮನ್ಸ್?
ತೇಜ್ಪಾಲ್ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ‘ತೆಹೆಲ್ಕಾ’ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ ಮತ್ತು ಇತರ ಮೂವರು ನೌಕರರಿಗೆ ಕೋರ್ಟ್ ಮೂಲಕ ಸಮನ್ಸ್ ಜಾರಿ ಮಾಡಲು ಸಿದ್ಧತೆಗಳು ನಡೆದಿವೆ ಎಂದು ಪೋಲಿಸ್ ಮೂಲಗಳು
ಹೇಳಿವೆ.
ಈ ಮಧ್ಯೆ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ‘ಈ ಪ್ರಕರಣದ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ. ತನಿಖಾಧಿಕಾರಿಗಳು ಮುಕ್ತವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ, ಆರೋಪಿ ವಿರುದ್ಧ ಒಂದು ತಿಂಗಳ ಒಳಗೆ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲಾಗುವುದು ಮತ್ತು ಆರೋಪಿಗೆ ನ್ಯಾಯ ಪಡೆಯಲು ನ್ಯಾಯೋಚಿತವಾದ ಎಲ್ಲ ಅವಕಾಶಗಳನ್ನು ಒದಗಿಸುವ ಭರವಸೆಯನ್ನು ನಾನು ನೀಡುವೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.