ಬೆಂಗಳೂರು: ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರ ವಿರುದ್ಧ ಅವಹೇಳನಕಾರಿ ವರದಿ ಪ್ರಕಟಿಸಿದ್ದ `ತರುಣ್ ಭಾರತ್~ ಮರಾಠಿ ಪತ್ರಿಕೆಯ ಸಂಪಾದಕ ಕಿರಣ್ ಠಾಕೂರ್ ಅವರಿಗೆ ವಿಧಾನ ಸಭೆಯ ಹಕ್ಕುಚ್ಯುತಿ ಸಮಿತಿ ನೋಟಿಸ್ ಜಾರಿ ಮಾಡಿದೆ.
ಶಾಸಕರ ಗೌರವಕ್ಕೆ ಚ್ಯುತಿ ಬರುವ ಹಾಗೆ ವರದಿ ಪ್ರಕಟಿಸಿರುವ ಕುರಿತು ಇದೇ 29ರಂದು ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಸಂಪಾದಕರಿಗೆ ನೋಟಿಸ್ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆ ಪ್ರಕಾರ ನೋಟಿಸ್ ರವಾನೆಯಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ತಮ್ಮ ವಿರುದ್ಧ ಅವಹೇಳನಕಾರಿ ವರದಿ ಮಾಡಿರುವ ಕುರಿತು ಶಾಸಕರಾದ ಅಭಯ್ ಪಾಟೀಲ ಮತ್ತು ಎಸ್.ಬಿ. ಘಾಟ್ಗೆ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ದೂರು ನೀಡಿದ್ದರು. ಸ್ಪೀಕರ್ ಆದೇಶದಂತೆ ಪರಿಶೀಲನೆ ನಡೆಸಿದ ಹಕ್ಕುಚ್ಯುತಿ ಸಮಿತಿ ನೋಟಿಸ್ ಜಾರಿ ಮಾಡಿದೆ.