ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾವೇರಿ-ಭಾಗಮಂಡಲ ಜಾತ್ರಾಮಯ

Last Updated 17 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಮಡಿಕೇರಿ: ಇಂದು ಮಧ್ಯರಾತ್ರಿ ತಲಕಾವೇರಿಯಲ್ಲಿ ನಡೆಯಲಿರುವ ಕೊಡಗಿನ ಕುಲದೇವತೆ ಕಾವೇರಿಯ ತೀರ್ಥೋದ್ಭವಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಭಾನುವಾರ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಜಿ.ಪಂ. ಸದಸ್ಯ ರಾಜಾರಾವ್, ಎಪಿಎಂಸಿ ಅಧ್ಯಕ್ಷ ಬೆಲ್ಲು ಸೋಮಯ್ಯ, ಇತರರು ಸಹ ಭೇಟಿ ನೀಡಿದ್ದರು.
ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಸೋಮವಾರ ಬೆಳಿಗ್ಗೆ ವೇಳೆಗೆ ಪೂರ್ಣಗೊಳ್ಳಲಿವೆ. ಈ ಪ್ರದೇಶವೀಗ ಸಂಪೂರ್ಣ ಜಾತ್ರಾಮಯವಾಗಿ ರೂಪುಗೊಂಡಿದೆ.

ಭಾಗಮಂಡಲದ ತಲಕಾವೇರಿ ಹಾಗೂ ಭಗಂಡೇಶ್ವರ ದೇವಸ್ಥಾನಗಳಿಗೆ ಸುಣ್ಣ-ಬಣ್ಣ ಹಚ್ಚುವ ಕೆಲಸ ಪೂರ್ಣಗೊಂಡಿದೆ. ಇದರ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಗುತ್ತಿದೆ. ತ್ರೀವೇಣಿ ಸಂಗಮದಲ್ಲಿ ಭಕ್ತರು ಪುಣ್ಯಸ್ನಾನ ಮಾಡುವುದರಿಂದ ಇಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಭಕ್ತಾದಿಗಳಿಗೆ ಸ್ನಾನಕ್ಕೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಶೌಚಾಲಯಕ್ಕೂ ವ್ಯವಸ್ಥೆ ಮಾಡಲಾಗಿದೆ.

ಅನ್ನದಾನಕ್ಕೆ ವಿಶೇಷ ತಂಡ
ಇದೇ ಮೊದಲ ಬಾರಿಗೆ ದೇವಸ್ಥಾನ ಆವರಣದೊಳಗೆ ಅನ್ನದಾನ ಮಾಡುವ ಜವಾಬ್ದಾರಿಯನ್ನು ತಲಕಾವೇರಿ- ಭಾಗಮಂಡಲ ದೇವಸ್ಥಾನ ಸಮಿತಿಗೆ ವಹಿಸಿಕೊಡಲಾಗಿದೆ.  ಅನ್ನದಾನ ಮಾಡುವ ಸಂದರ್ಭ ದಲ್ಲಿ ಶುಚಿತ್ವ ಕಾಪಾಡಲು ಹಾಗೂ ಜನದಟ್ಟಣೆಯಾಗದಂತೆ ನೋಡಿಕೊಳ್ಳಲು ಯುವಕರ ವಿಶೇಷ ತಂಡಗಳನ್ನೇ ರಚಿಸಲಾಗಿದೆ.

ಭಕ್ತರಿಗೆ ತಲಕಾವೇರಿಗೆ ಆಗಮಿಸಲು ವಿಶೇಷ ಬಸ್ ಸೌಕರ್ಯ ಮಾಡಲಾಗಿದೆ. ಮಡಿಕೇರಿ ನಡುವೆ ಓಡಾಟಕ್ಕೆ ಹೆಚ್ಚುವರಿಯಾಗಿ 20 ಬಸ್‌ಗಳು ಹಾಗೂ ತಲಕಾವೇರಿ- ಭಾಗಮಂಡಲ ನಡುವೆ 10 ಡಬಲ್ ಡೋರ್ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ತಲಕಾವೇರಿಯವರೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಬೃಹತ್ ವಾಹನಗಳನ್ನು ಭಾಗಮಂಡಲದಲ್ಲಿಯೇ ನಿಲ್ಲಿಸಬೇಕಾಗುತ್ತದೆ. ನಾಲ್ಕು ಚಕ್ರದ ವಾಹನಗಳನ್ನು ಮಾತ್ರ ತಲಕಾವೇರಿ ಬಳಿಯ ಪಾರ್ಕಿಂಗ್ ಸ್ಥಳಕ್ಕೆ ಬಿಡಲಾಗುವುದು. ಅಲ್ಲಿಂದ 200 ಮೀಟರ್ ನಡೆದು ಭಕ್ತಾಧಿಗಳು ತಲಕಾವೇರಿಗೆ ತೆರಳಬೇಕಾಗಿದೆ.

ಪಾಸ್ ಹೊಂದಿರುವ ಗಣ್ಯರು ಹಾಗೂ ಅಗತ್ಯತೆ ಇರುವ ವಾಹನಗಳಿಗೆ ಮಾತ್ರ ತಲಕಾವೇರಿ  ದೇವಸ್ಥಾನದ ಬಳಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT