ಇದು ತಾಲ್ಲೂಕಿನಲ್ಲಿ ಬಹು ಚರ್ಚೆಯ ವಿಷಯವಾಗಿ ಎಲ್ಲೆಂದರಲ್ಲಿ ಚರ್ಚೆ ನಡೆಯುವಂತಾಗಿದೆ. ಅಡಿಕೆ ಬೆಳೆಯನ್ನು ನಿಷೇಧ ಮಾಡುವುದರಿಂದ ಕೇವಲ ಅಡಿಕೆ ಬೆಳೆಗಾರರು ಮಾತ್ರ ಬೀದಿಗೆ ಬೀಳುವುದಷ್ಟೇ ಅಲ್ಲದೇ ಈ ಬೆಳೆಯನ್ನೇ ನಂಬಿಕೊಂಡು ಜೀವನ ನಿರ್ವಹಿಸುವ ಸಹಸ್ರಾರು ಕೂಲಿ ಕಾರ್ಮಿಕರು ಕೂಡಾ ಕೆಲಸ ಇಲ್ಲದೇ ಬೀದಿಗೆ ಬೀಳುವಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಹೊರಟಿರುವುದು ಅಡಿಕೆ ಬೆಳೆಗಾರರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ಹಲವಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಸಹಸ್ರಾರು ಎಕರೆಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ತಾಲ್ಲೂಕು ಒಂದರಲ್ಲಿಯೇ ಅಡಿಕೆಯಿಂದ ಪ್ರತಿವರ್ಷ ಸುಮಾರು ₨ 900 ಕೋಟಿಗಿಂತಲೂ ಹೆಚ್ಚು ವಹಿವಾಟು ವಿವಿಧ ಅಡಿಕೆ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಈಗ ಕೇಂದ್ರ ಸರ್ಕಾರ, ಅಡಿಕೆ ಬೆಳೆಗಾರ ರಕ್ಷಣೆಗೆ ಧಾವಿಸದೇ ಇಡೀ ಅಡಿಕೆ ಬೆಳೆಯನ್ನೇ ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಪ್ರಸ್ತಾವವನ್ನು ಕೋರ್ಟ್ಗೆ ಸಲ್ಲಿಸಿರುವುದು ಅಡಿಕೆ ಬೆಳೆಗಾರರ ಮೇಲೆ ಯುದ್ಧವನ್ನು ಮಾಡಲು ಹೊರಟಂತಿದೆ.