ಕೆಂಗೇರಿ: ಬೇರು ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಲು ಮತ್ತು ಬೆಳೆಸಲು ಸಹಕರಿಸಬೇಕೆಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.ಯಶವಂತಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಅಪ್ಪ- ಮಕ್ಕಳ ಪಕ್ಷವೆಂದು ಟೀಕಿಸುವವರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಮುಖಂಡರ ಸಭೆ ಕರೆದು ಕಾರ್ಯಕರ್ತರು ಸೂಚಿಸಿದ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು~ ಎಂದು ಅವರು ಹೇಳಿದರು.
`ಇದರಿಂದ ಟಿಕೆಟ್ಗಾಗಿ ಕಚ್ಚಾಡುವವರು ಮೊದಲು ಕಾರ್ಯಕರ್ತರು ಮತ್ತು ಮತದಾರರ ಮನಗೆಲ್ಲಲು ಪ್ರಯತ್ನಿಸಬೇಕು. ಜನರೇ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಟಿಕೆಟ್ಗಾಗಿ ಕಚ್ಚಾಡಿಕೊಂಡು ಪಕ್ಷದಲ್ಲಿ ಗೊಂದಲಗಳನ್ನು ಉಂಟು ಮಾಡುವುದರಿಂದ ಕಾರ್ಯಕರ್ತರಿಗೆ ಬೇಸರವಾಗುತ್ತದೆ. ಪಕ್ಷದ ಹಿನ್ನಡೆಗೂ ಕಾರಣವಾಗುತ್ತದೆ~ ಎಂದು ಅವರು ಅತಂಕ ವ್ಯಕ್ತಪಡಿಸಿದರು.
ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿರೆಡ್ಡಿ, ಕ್ಷೇತ್ರ ಘಟಕದ ಅಧ್ಯಕ್ಷ ಪಂಚಲಿಂಗಯ್ಯ, ಪಾಲಿಕೆ ಸದಸ್ಯ ಹನುಮಂತೇಗೌಡ, ಜೆಡಿಎಸ್ ಮುಖಂಡ ಜವರಾಯಿಗೌಡ, ನಗರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನ್ನಪೂರ್ಣ ಕೃಷ್ಣಮೂರ್ತಿ, ಸರ್ವಮಂಗಳ ಕೃಷ್ಣಪ್ಪ ಹಾಜರಿದ್ದರು.