ಶಿಕಾರಿಪುರ: ಹಾವೇರಿಯಲ್ಲಿ ಡಿ. 10 ರಂದು ಆಯೋಜಿಸಿರುವ ಸಮಾವೇಶದಲ್ಲಿ ನನ್ನ ರಾಜಕೀಯ ಪಕ್ಷ ಬದಲಾವಣೆ ಹಾಗೂ ನನ್ನ ನೂತನ ಪಕ್ಷ ರಚನೆ ಆಗಲಿದ್ದು, ಈ ಐತಿಹಾಸಿಕ ಸಮಾವೇಶಕ್ಕೆ ನೀವೆಲ್ಲಾ ಆಗಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರದ ಜನರಿಗೆ ಆಹ್ವಾನಿಸಿದರು.
ತಾಲ್ಲೂಕಿನ ಇಟ್ಟಿಗೆಹಳ್ಳಿ, ಕೆಂಗಟ್ಟೆ ಹಾಗೂ ಮುದ್ದನಹಳ್ಳಿಯಲ್ಲಿ ಗುರುವಾರ ನಡೆದ ತಾಲ್ಲೂಕಿನ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಒಂದು ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡದೇ ದ್ರೋಹ ಮಾಡಿದರು. ಭ್ರಷ್ಟಾಚಾರದ ಹಲವಾರು ಕೇಸುಗಳನ್ನು ಹಾಕಿಸಿ ನನ್ನ ತೇಜೋವಧೆ ಮಾಡಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವಮಾನ ಮಾಡಿದರು. ಆದರೆ, ಇಂದು ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಭ್ರಷ್ಟಾಚಾರದ ಬಗ್ಗೆ ಪತ್ರಿಕೆಗಳಲ್ಲಿ ಬಂದಿದೆ ಎಂದರು.
ಎಲ್ಲ ಜಿಲ್ಲೆಗಳ ಮುಖಂಡರ ಜತೆ ನಾನು ಚರ್ಚಿಸಿದ್ದು, ಅವರೆಲ್ಲಾ ನೀವು ನೂತನ ಪಕ್ಷ ರಚನೆ ಮಾಡಿ ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಡಿ.10ರಂದು ಹಾವೇರಿಯಲ್ಲಿ ಸುಮಾರು 5-6 ಲಕ್ಷ ಅಭಿಮಾನಿಗಳು ಭಾಗವಹಿಸುವ ಸಮಾವೇಶದಲ್ಲಿ ನೂತನ ಪಕ್ಷ ರಚನೆ ಮಾಡುತ್ತೇನೆ ಎಂದು ಘೋಷಿಸಿದರು.