ದಾವಣಗೆರೆ: ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಅವರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಸೋಮವಾರ ತಡೆಯಾಜ್ಞೆ ನೀಡಿದೆ.
ಹರೀಶ್ ಅವರು ತಾಲ್ಲೂಕಿನಲ್ಲಿ 28 ತಿಂಗಳು ಕಾರ್ಯ ನಿರ್ವಹಿಸಿದ್ದು ಮೂರು ವರ್ಷ ಪೂರ್ಣಗೊಳಿಸಿಲ್ಲ. ಅವರನ್ನು ವರ್ಗಾವಣೆ ಮಾಡಿದ ಸರ್ಕಾರ ಸ್ಥಳವನ್ನೇ ತೋರಿಸಿಲ್ಲ. ಅಲ್ಲದೇ, ದಾವಣಗೆರೆಗೆ ವರ್ಗವಾಗಿ ಬಂದ ಮುಂಡಗೋಡು ತಹಶೀಲ್ದಾರ್ ಮಂಜುನಾಥ್ ಎಸ್. ಬಳ್ಳಾರಿ, ಮುಂಡಗೋಡಿಗೆ ಕೇವಲ 3 ತಿಂಗಳ ಹಿಂದೆಯಷ್ಟೇ ನಿಯೋಜನೆ ಮೇಲೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಗಾವಣೆಗೆ ತಡೆ ನೀಡಿರುವುದಾಗಿ ಕೆಎಟಿ ತಿಳಿಸಿದೆ.
ಕೆಲವೇ ಸಮಯಕ್ಕೆ ವಾಪಸ್: ಮುಂಡಗೋಡಿನಿಂದ ವರ್ಗಾವಣೆಗೊಂಡ ಮಂಜುನಾಥ್ ಸೋಮವಾರ ಬೆಳಿಗ್ಗೆ ತಾಲ್ಲೂಕು ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಕೆಲ ಸಮಯದಲ್ಲೇ ಹರೀಶ್ ವರ್ಗಾವಣೆಗೆ ಕೆಎಟಿ ತಡೆ ನೀಡಿದ ಹಿನ್ನೆಲೆಯಲ್ಲಿ ಅವರು ವಾಪಸ್ ಆದರು.