ಲಕ್ಷ್ಮೇಶ್ವರ: `ಸರ್ಕಾರ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಮೂಲಕ ತಾಂಡಾಗಳ ಅಭಿವೃದ್ಧಿಗೆ ಅನುದಾನ ನೀಡಿದ್ದು ಈ ಅನುದಾನದಲ್ಲಿ ತಾಲ್ಲೂಕಿನ ತಾಂಡಾಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಈಚೆಗೆ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
`ಉತ್ತರ ಕರ್ನಾಟಕದಲ್ಲಿ ತಾಂಡಾಗಳ ಸಂಖ್ಯೆ ಬಹಳ ಇದ್ದು ಬಹುತೇಕ ತಾಂಡಾಗಳು ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದವು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಅವುಗಳ ಅಭಿವೃದ್ಧಿಗೆ 300 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಅದರಂತೆ ಈ ಬಾರಿ ತಾಲ್ಲೂಕಿನ ತಾಂಡಾಗಳಿಗೆ ಮೂಲ ಸೌಕರ್ಯ ಒದಗಿಸಲು 4 ಕೋಟಿ ಅನುದಾನ ಬಂದಿದ್ದು ಹಂತ ಹಂತವಾಗಿ ಎಲ್ಲ ತಾಂಡಾಗಳಲ್ಲಿ ಕಾಮಗಾರಿ ಕೈಗೊಳ್ಳ ಲಾಗುವುದು~ ಎಂದರು. ಇದೇ ಸಂದರ್ಭದಲ್ಲಿ ಅವರು ದೊಡ್ಡೂರು ತಾಂಡಾ, ಯಲ್ಲಾಪುರ ತಾಂಡಾ, ಸೂರಣಗಿ ತಾಂಡಾ ಹಾಗೂ ಬಾಳೇಹೊಸೂರಿನ ಎಸ್ಟಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಲಾಲಪ್ಪ ಲಮಾಣಿ, ಕಾಶಪ್ಪ ಲಮಾಣಿ, ಚಂದ್ರಶೇಖರ ಲಮಾಣಿ, ನಾಗರಾಜ ಯಳವತ್ತಿ, ಪುಂಡಲೀಕ ಲಮಾಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎನ್ಹಂಪಣ್ಣ, ಜಿ.ಆರ್. ಕೊಪ್ಪದ, ಶಿವಣ್ಣ ಲಮಾಣಿ, ಮಹಾದೇವಗೌಡ ನರಸಮ್ಮನವರ, ತಾವರೆಪ್ಪ ಲಮಾಣಿ, ಡಾ.ಎನ್.ವಿ. ಹೆಬಸೂರ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೋಟೆಪ್ಪ ವರ್ದಿ, ಬಸವರೆಡ್ಡಿ ಹನಮರೆಡ್ಡಿ, ನಾಗರಾಜ ಮಠಪತಿ, ಸಿದ್ದಪ್ಪ ಶಿಗ್ಲಿ, ಅಮರಪ್ಪ ಗುಡಗುಂಟಿ, ದೇವಣ್ಣ ಮತ್ತೂರ, ರಾಮಪ್ಪ ಕಳ್ಳಿಮನಿ, ಟೋಪಣ್ಣ ಲಮಾಣಿ, ಓಂಕಾರೆಪ್ಪ ಲಮಾಣಿ, ಲಲಿತಾ ಲಮಾಣಿ, ಕಸ್ತೂರೆವ್ವ ಬಾರ್ಕಿ, ಫಕ್ಕೀರಗೌಡ್ರ ಭರ್ಮಗೌಡ್ರ, ಭೂಸೇನಾ ನಿಗಮದ ಎಂಜನೀಯರ್ ಮಾಳದಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.