ತಿಪಟೂರು: ಕ್ರಿಯಾಶೀಲತೆಯಿಂದ ಮಾತ್ರ ಸಮಾಜಕ್ಕೆ ತಾಂತ್ರಿಕತೆ ಲಾಭ ಸಿಗಲು ಸಾಧ್ಯ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ಮಾಜಿ ಜಂಟಿ ನಿರ್ದೇಶಕ ಆರ್.ಕೃಷ್ಣಮೂರ್ತಿ ತಿಳಿಸಿದರು.
ನಗರದ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಿಂದ ಶುಕ್ರವಾರ ಆರಂಭವಾದ ಎರಡು ದಿನಗಳ ಮೆಕ್ ಮ್ಯೋಸ್ಟಿಕ್~ ರಾಷ್ಟ್ರ ಮಟ್ಟದ ವಿದ್ಯಾರ್ಥಿ ತಾಂತ್ರಿಕ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅನ್ವಯಿಕ ಶಕ್ತಿ ಸಾರ್ಥಕತೆ ಅಡಗಿರುವ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಅನ್ವೇಷಣೆ ಗುಣ ಬೇಡುತ್ತದೆ. ಬಲವಂತದ ತಾಂತ್ರಿಕ ಶಿಕ್ಷಣ ಚಿಂತನೆ ಬೆಳೆಸುವುದಿಲ್ಲ. ತಾಂತ್ರಿಕತೆಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಮುಖ್ಯ ಎಂದರು.
ಐಎಸ್ಟಿಇ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಎಂ.ಬಸವರಾಜು ಗೋಷ್ಠಿಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ತಾಂತ್ರಿಕ ಜ್ಞಾನದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಜಾಗತಿಕ ಅವಕಾಶಗಳಿಗೆ ಆದ್ಯತೆ ನೀಡಬೇಕು. ತಾಂತ್ರಿಕ ಕ್ಷೇತ್ರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಹತ್ವದ ಕೊಡುಗೆ ನೀಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದರು.