ಮಾಲೂರು: ಸರ್ಕಾರದ ಅನುದಾನದಿಂದ ನಡೆಯುವ ಕಾಮಗಾರಿ ಬಗ್ಗೆ ಸಾರ್ವಜನಿಕರು ಗಮನ ಹರಿಸಿದಾಗ ಮಾತ್ರ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ ಎಂದು ಶಾಸಕ ಎಸ್. ಎನ್. ಕೃಷ್ಣಯ್ಯಶೆಟ್ಟಿ ತಿಳಿಸಿದರು.
ಮುಖ್ಯಮಂತ್ರಿ ಅನುದಾನದಡಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಹಿಂಬದಿ ರೂ. 37 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ, ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸುಸಜ್ಜಿತವಾದ ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿದಂತೆ ರೈತ ಸಭಾಂಗಣ, ಸಾರ್ವಜನಿಕರ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುವುದು. ಚಂಬೆ ನಾರಾಯಣಸ್ವಾಮಿ ಗುತ್ತಿಗೆ ಕಾಮಗಾರಿ ವಹಿಸಿಕೊಂಡಿರುವುದರಿಂದ ಉತ್ತಮ ಗುಣಮಟ್ಟದಲ್ಲಿ ಕೆಲಸ ನಡೆಯುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿಗೆ ಸೇರಿದ ಕಟ್ಟಡದ ಪಕ್ಕದಲ್ಲೇ ಇರುವ ಸಾಯಿಬಾಬಾ ದೇಗುಲಕ್ಕೆ ಭಜನೆ ಮಂದಿರ ನಿರ್ಮಾಣಕ್ಕೆ 10 ಅಡಿ ಜಾಗವನ್ನು ನೀಡಿ, ಉಚಿತವಾಗಿ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಜನೀಕಾಂತ್ ಮಲ್ಲಿ, ಸದಸ್ಯ ದೊಡ್ಡಿರಾಜಪ್ಪ, ಮುಖಂಡ ಎ.ಅಶ್ವಥರೆಡ್ಡಿ, ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ ಉಪಸ್ಥಿತರಿದ್ದರು.