ಯಾದಗಿರಿ: ಬರಪೀಡಿತ ತಾಲ್ಲೂಕು ಆಗಿ ಯಾದಗಿರಿಯನ್ನು ಘೋಷಣೆ ಮಾಡುವಂತೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಸದಸ್ಯರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಸೋಮವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಸದಸ್ಯರು, ತಾಲ್ಲೂಕಿನಲ್ಲಿ ಮಳೆ ಆಗಿಲ್ಲ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಯಾದಗಿರಿ ತಾಲ್ಲೂಕು ಬರಪೀಡಿತ ಪ್ರದೇಶವೆಂದು ಘೋಷಣೆ ಆಗಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಂಗಾರು ಹಂಗಾಮಿನಲ್ಲಿ ಹೆಸರು ಬಿತ್ತನೆ ಮಾಡದೇ ಕಂಗಾಗಲಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಜೋಳ ಬಿತ್ತನೆಗಾಗಿ ಪರದಾಡುತ್ತಿದ್ದಾರೆ. ಮಳೆ ಆಗದೇ ಸಂಕಷ್ಟ ಸ್ಥಿತಿಯಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಕವಾಲ್ದಾರ, ಸದಸ್ಯರಾದ ಹಣಮಂತ ಬಳಿಚಕ್ರ, ಶಾಂತಿಬಾಯಿ ಯರಗೋಳ, ಅಂಬಯ್ಯ ಅ್ಲ್ಲಲಿಪೂರ, ಮಾರುತಿ ಮುಂಡಾಸ್, ಜಗದೇವಿ ನಸಲವಾಯಿ, ನಾಗೇಂದ್ರ ಠಾಣಗುಂದಿ, ಹಣಮಂತ ಕೌಳೂರು ಮುಂತಾದವರು ಮನವಿ ಸಲ್ಲಿಸಿದರು.