ಸುಳ್ಯ: ತವರು ಮನೆಗೆ ಬಂದ ಗೃಹಿಣಿ ಹಾಗೂ ಆಕೆಯ ಇಬ್ಬರು ಪುಟ್ಟ ಮಕ್ಕಳು ಕೆರೆಗೆ ಬಿದ್ದು ಮೃತಪಟ್ಟ ಧಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಉಬರಡ್ಕದಲ್ಲಿ ನಡೆದಿದೆ.
ತಾಲ್ಲೂಕಿನ ಉಬರಡ್ಕ ಗ್ರಾಮದ ಬೆಳರಂಪಾಡಿ ಕೆ.ಎ.ಗೋಪಾಲಕೃಷ್ಣ ಭಟ್ ಅವರ ಪುತ್ರಿ ಶರ್ಮಿಳಾ (29), ಆಕೆಯ ಪುತ್ರ 6 ವರ್ಷದ ಸುಧನ್ವ ಹಾಗೂ 8 ತಿಂಗಳ ಮಗು ಸ್ನೇಹಾ ಮೃತರು.
ಶರ್ಮಿಳಾ ಅವರನ್ನು ಬಂಟ್ವಾಳ ತಾಲ್ಲೂಕು ಕನ್ಯಾನ ಗ್ರಾಮದ ಮುಚ್ಚಿರಪದವು ಪದ್ಮನಾಭ ಭಟ್ ಎಂಬುವವರಿಗೆ ಏಳು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಬುಧವಾರ ಪದ್ಮನಾಭ ಭಟ್, ಪತ್ನಿ ಹಾಗೂ ಮಕ್ಕಳೊಂದಿಗೆ ಬೆಳರಂಪಾಡಿಯ ಮಾವನ ಮನೆಗೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಅವರು ತಮ್ಮ ಊರಿಗೆ ಹೊರಟಾಗ ಜತೆಗೆ ಗೋಪಾಲಕೃಷ್ಣ ಭಟ್ ಸುಳ್ಯದವರೆಗೂ ಹೋಗಿದ್ದರು. ಮನೆಯಲ್ಲಿ ಶರ್ಮಿಳಾ, ಮಕ್ಕಳು ಹಾಗೂ ತಾಯಿ ಮಾತ್ರ ಇದ್ದರು.
12 ಗಂಟೆ ವೇಳೆಗೆ ತೋಟದ ಕೆರೆಯಲ್ಲಿ ಮೂವರು ಬಿದ್ದು ಮೃತರಾದ ಸುದ್ದಿ ನಂತರ ಮನೆಯವರಿಗೆ ತಿಳಿಯಿತು.
ಮಕ್ಕಳು ನೀರಿಗೆ ಆಕಸ್ಮಿಕವಾಗಿ ಬಿದ್ದಿದ್ದು, ರಕ್ಷಿಸಲು ಯತ್ನಿಸಿ ತಾಯಿಯೂ ನೀರು ಪಾಲಾಗಿರಬೇಕು ಎಂದು ಶಂಕಿಸಲಾಗಿದೆ.