ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), 2011ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರ್ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಈಗ ಸರ್ಕಾರವೇ ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ ಖಚಿತ ಎಂದಿದ್ದಾರೆ.
ಅಷ್ಟಕ್ಕೇ ಈ ಹಗರಣ ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿದಂತಾಗುವುದಿಲ್ಲ. ನೇಮಕಾತಿ ಅಕ್ರಮದಲ್ಲಿ ಪಾಲ್ಗೊಂಡಿರುವುದು ಆಯೋಗದ ಸದಸ್ಯರು, ಕೆಲವು ಸಿಬ್ಬಂದಿ ಮತ್ತು ಏಜೆಂಟರಷ್ಟೇ ಅಲ್ಲ. ಸಿಐಡಿ ತನಿಖೆಯ ವರದಿ ಹೇಳುತ್ತಿರುವಂತೆ ವಿಷಯತಜ್ಞರೂ ಮೌಲ್ಯಮಾಪಕರೂ ಈ ಅಕ್ರಮದಲ್ಲಿ ಪಾಲುದಾರರು.
ಇವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಕುರಿತಂತೆ ಸರ್ಕಾರ ಈತನಕ ಒಂದು ಮಾತನ್ನೂ ಹೇಳಿಲ್ಲ. ಈ ಹಿಂದೆ 1998ರ ನೇಮಕಾತಿಯಲ್ಲಿ ಆದ ಅಕ್ರಮವನ್ನು ಸರಿಪಡಿಸುವ ಉದ್ದೇಶದಿಂದ ನ್ಯಾಯಾಲಯದ ಆದೇಶದ ಮೇರೆಗೆ ಹೊಸ ಪಟ್ಟಿಯೊಂದನ್ನು ಆಯೋಗ ಸಿದ್ಧಪಡಿಸಿತ್ತು. ಇದರ ಅನ್ವಯ ನಡೆಸಿದ ಸಂದರ್ಶನದಲ್ಲಿಯೂ ಅಕ್ರಮಗಳು ನಡೆದಿರುವುದು ಬಯಲಾಗಿ ಆಗಿನ ಅಧ್ಯಕ್ಷರು ಕೆಲಕಾಲ ಜೈಲುವಾಸವನ್ನೂ ಅನುಭವಿಸಿ ಈಗ ಜಾಮೀನಿನ ಮೇಲಿದ್ದಾರೆ.
ಈ ಅಕ್ರಮ ನೇಮಕಾತಿಯ ಫಲಾನುಭವಿಗಳಾದ ಮೂವರು ಅಧಿಕಾರಿಗಳು ಈಗಿನ ಮುಖ್ಯಮಂತ್ರಿ, ಗೃಹ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಕಚೇರಿಯ ಆಯಕಟ್ಟಿನ ಸ್ಥಾನಗಳಲ್ಲಿ ಇದ್ದಾರೆಂಬುದು ನಾಚಿಕೆಗೇಡಿನ ವಿಚಾರ. ಇವೆಲ್ಲವನ್ನೂ ನೋಡುವ ಯಾರಿಗೇ ಆದರೂ ಸರ್ಕಾರ ನೀಡುತ್ತಿರುವ ಭರವಸೆಗಳೆಲ್ಲವೂ ತೋರಿಕೆಯವೆಂಬ ಸಂಶಯ ಬರಬಹುದು. ಜೊತೆಗೆ ಕೆಪಿಎಸ್ಸಿ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರಲ್ಲಿ ಸರ್ಕಾರದ ಹಸ್ತಕ್ಷೇಪ ಸಾಧ್ಯವಿಲ್ಲ ಎಂಬ ಸಬೂಬನ್ನೂ ಸೇರಿಸಿಕೊಂಡರೆ ಸಮಸ್ಯೆ ಜಟಿಲವಾಗಿರುವಂತೆ ಕಾಣಿಸುತ್ತದೆ.
ಅಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಯಾವುದೇ ಅಡ್ಡಿಗಳಿಲ್ಲ. ಸ್ವಾಯತ್ತ ಸಂಸ್ಥೆಯ ತಪ್ಪುಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಈಗಾಗಲೇ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಶೋಧಿಸಲೂ ಸಾಧ್ಯವಿದೆ. 1998, 1999 ಮತ್ತು 2004ರ ಅಕ್ರಮ ನೇಮಕಾತಿ ಪ್ರಕರಣಗಳ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಅಂದಿನ ಸರ್ಕಾರಗಳಿಗೆ ಯಾವುದೇ ಅಡ್ಡಿಗಳಿರಲಿಲ್ಲ.
ಆದರೆ ಹಿಂದಿನ ಐವರು ಮುಖ್ಯಮಂತ್ರಿಗಳು ತಟಸ್ಥರಾಗಿದ್ದರು. ಮೌಲ್ಯಮಾಪಕರು ಮತ್ತು ವಿಷಯತಜ್ಞರ ವಿರುದ್ಧ ಕ್ರಮ ಜರುಗಿಸುವ ಪ್ರಯತ್ನ ಈತನಕವೂ ನಡೆದಿಲ್ಲ. 1998ರ ಹಗರಣದ ರೂವಾರಿಗಳಲ್ಲಿ ಒಬ್ಬರಾಗಿದ್ದ ಮೈಸೂರು ವಿಶ್ವವಿದ್ಯಾಲಯದ ಅಂದಿನ ಇತಿಹಾಸ ಪ್ರಾಧ್ಯಾಪಕರ ವಿರುದ್ಧ ಯಾವ ಕೇಸೂ ದಾಖಲಾಗಿಲ್ಲ.
ಇನ್ನು ಈ ಬಾರಿಯ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ, ಅಕ್ರಮದಲ್ಲಿ ಭಾಗಿಯಾದವರೇ ನಡೆಸಿದರೆ ಇದೂ 1998ರ ನೇಮಕಾತಿ ಹಗರಣದ ಹಾದಿ ಹಿಡಿಯುವುದಿಲ್ಲ ಎಂಬುದಕ್ಕೆ ಏನು ಖಾತರಿ? ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೂ ಪಾಲಿರುವ ಈ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಏನೂ ಮಾಡದಿದ್ದರೂ ಯಾವ ಪಕ್ಷವೂ ಪ್ರಶ್ನಿಸುವುದಿಲ್ಲ.
ಆದರೆ ಜನಸಾಮಾನ್ಯರು ಮಾತ್ರ ಸಿದ್ದರಾಮಯ್ಯನವರು ಉಳಿದವರಿಗಿಂತ ಭಿನ್ನವಾಗಿರುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆಂಬುದನ್ನು ಅವರು ಮರೆಯಬಾರದು. ಇದು ಕೇವಲ ಉದ್ಯೋಗಾಕಾಂಕ್ಷಿಗಳ ಹಿತ ಕಾಯುವ ಪ್ರಶ್ನೆಯಷ್ಟೇ ಅಲ್ಲ. ಇದು ಸರ್ಕಾರ ತನ್ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೈಗೊಳ್ಳಲೇಬೇಕಾದ ಕ್ರಮ ಮತ್ತು ನೇಮಕಾತಿ ವ್ಯವಸ್ಥೆಯೊಂದನ್ನು ಶುದ್ಧೀಕರಿಸುವ ಹೆಜ್ಜೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.