ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಮಟ್ಟದಲ್ಲಿ ಅಂಗವಿಕಲರ ಅದಾಲತ್

Last Updated 22 ನವೆಂಬರ್ 2011, 9:55 IST
ಅಕ್ಷರ ಗಾತ್ರ

ಚಾಮರಾಜನಗರ:`ಅಂಗವಿಕಲರ ಕುಂದುಕೊರತೆ ಆಲಿಸಲು ತಾಲ್ಲೂಕುಮಟ್ಟದಲ್ಲೂ ಅದಾಲತ್ ನಡೆಸಲಾಗುವುದು~ ಎಂದು ಜಿಲ್ಲಾಧಿಕಾರಿ ಕೆ. ಅಮರನಾರಾಯಣ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಅಂಗವಿಕಲರ ಕುಂದುಕೊರತೆ, ಅಹವಾಲು ಆಲಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅದಾಲತ್‌ನಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಅಂಗವಿಕಲರ ಅಹವಾಲು, ಕುಂದುಕೊರತೆ ಸಭೆಯನ್ನು ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಇಲ್ಲಿಗೆ ಎಲ್ಲ ತಾಲ್ಲೂಕಿನ ಅಂಗವಿಕಲರು ಬರಲು ಶ್ರಮವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕು ಮಟ್ಟದಲ್ಲೆೀ ತಹಶೀಲ್ದಾರ್ ನೇತೃತ್ವದಡಿ ಅದಾಲತ್ ನಡೆಸಬೇಕು ಎಂದು ಸೂಚಿಸಿದರು.

ಅಂಗವಿಕಲರು ಅನುಭವಿಸುತ್ತಿರುವ ಸಮಸ್ಯೆ, ದೂರುಗಳು ಜಿಲ್ಲಾಧಿಕಾರಿ ಕಚೇರಿವರೆಗೆ ಬರಲು ಆಸ್ಪದ ನೀಡಬಾರದು. ಆಯಾ ತಾಲ್ಲೂಕುಗಳಲ್ಲಿಯೇ ಸಮಸ್ಯೆ ಬಗೆಹರಿಸಬೇಕು. ಅರ್ಹರಿಗೆ ಸಮರ್ಪಕವಾಗಿ ಸವಲತ್ತು ತಲುಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ಇತ್ಯರ್ಥವಾಗದ ಸಮಸ್ಯೆಗಳನ್ನು ಜಿಲ್ಲಾಮಟ್ಟದಲ್ಲಿ ಪರಿಹರಿಸಲಾಗುವುದು ಎಂದರು.

ಅಂಗವಿಕಲರ ವಿವಿಧೋದ್ದೇಶ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ತಮ್ಮ ಕ್ಷೇತ್ರದ ವ್ಯಾಪ್ತಿ ಅಂಗವಿಕಲರ ಕಲ್ಯಾಣಕ್ಕಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ತಿಂಗಳ ಮೊದಲ ಶನಿವಾರದಂದು ತಾಲ್ಲೂಕು ಆಡಳಿತದಿಂದ  ನಡೆಯುವ ಹೋಬಳಿಮಟ್ಟದ ಜನಸ್ಪಂದನ ಸಭೆಗಳಿಗೆ ಆಗಮಿಸಿ ಅಂಗವಿಕಲರ ಸಮಸ್ಯೆ ಕುರಿತು ತಿಳಿಸಬೇಕು ಎಂದು ಹೇಳಿದರು.

ಅಂಗವಿಕಲರಿಗೆ ಯೋಜನೆಗಳಲ್ಲಿ ನಿಯಮಾನುಸಾರ ಮೀಸಲಾತಿ ಇದೆ. ನಗರಸಭೆಯಿಂದ ನೀಡಲಾಗುವ ನಿವೇಶನ ಪಡೆಯಲು ಅವಕಾಶವಿದೆ. ಇದಕ್ಕೆ ಅಗತ್ಯ ದಾಖಲಾತಿ ನೀಡಿ ಅರ್ಹರು ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಅಂಗವಿಕಲರ ಮಾಸಾಶನ ನೀಡಿಕೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು. ಶೇ. 75ಕ್ಕಿಂತ ಹೆಚ್ಚು ಅಂಗವೈಕಲ್ಯ ಇದ್ದರೆ 1 ಸಾವಿರ ಮಾಸಿಕ ಧನ ವಿತರಿಸಬೇಕು. ವೈದ್ಯರಿಂದ ಅಂಗವೈಕಲ್ಯ ದೃಢೀಕರಿಸಿ ಅರ್ಹರಿಗೆ ಸವಲತ್ತು ನೀಡಲು ಕಲ್ಯಾಣಾಧಿಕಾರಿ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು. 

ಸಾಮಾಜಿಕ ಯೋಜನೆಗಳ ಫಲಾನುಭವಿಗಳು ಕಡ್ಡಾಯವಾಗಿ ಭಾವಚಿತ್ರ ಹೊಂದಿರುವ ಸ್ಮಾರ್ಟ್‌ಕಾರ್ಡ್ ಪಡೆಯಬೇಕು.  ಭಾವಚಿತ್ರ ತೆಗೆಯುವ ಕಾರ್ಯಕ್ರಮ ಈಗಾಗಲೇ ಯಳಂದೂರು ತಾಲ್ಲೂಕಿನಲ್ಲಿ ಪೂರ್ಣಗೊಂಡಿದೆ.

ಇಂದಿನಿಂದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಆರಂಭವಾಗಿದೆ. ಅಂಗವಿಕಲರು ಯೋಜನೆಯ ಪ್ರಯೋಜನ ಪಡೆಯಲು ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  20 ಅರ್ಜಿ ಸ್ವೀಕರಿಸಲಾಯಿತು. ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ವಿ. ಕುಮಾರ್, ತಾಲ್ಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಅವರು, ಅಂಗವಿಕಲರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಅದಾಲತ್‌ನಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರೇವಣೇಶ್, ಸಂಘಟನೆಯ ಕಾರ್ಯಕರ್ತೆರಾದ ರಘು, ರೂಪೇಶ್, ರಾಜೇಶ್ ಇತರರು ಹಾಜರಿದ್ದರು.

26ಕ್ಕೆ ವಿಶ್ವ ಅಂಗವಿಕಲ ದಿನಾಚರಣೆ ಪೂರ್ವಭಾವಿ ಸಭೆ
ವಿಶ್ವ ಅಂಗವಿಕಲರ ದಿನವನ್ನು ಜಿಲ್ಲಾಮಟ್ಟದಲ್ಲಿ ಆಚರಿಸುವ ಸಂಬಂಧ ನ. 26ರಂದು ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಂಗವಿಕಲರ ಅದಾಲತ್ ನಂತರ ದಿನಾಚರಣೆ ವಿಷಯ ಪ್ರಸ್ತಾಪವಾಯಿತು.

ಜಿಲ್ಲಾಧಿಕಾರಿ ಅಮರನಾರಾಯಣ ಮಾತನಾಡಿ, ಅಂಗವಿಕಲರಿಗೆ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸಬೇಕು. ಡಾ.ಬಿ.       ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಏರ್ಪಡಿಸಲು ಅಗತ್ಯ ಸಿದ್ಧತೆ ಮಾಡಬೇಕು.
 
ಅಂಗವಿಕಲರಿಗೆ ಯಾವುದೇ ತೊಂದರೆಯಿಲ್ಲದೆ ಭಾಗವಹಿಸಬಹುದಾದ ಕ್ರೀಡೆಗಳನ್ನು ಮಾತ್ರವೇ ಆಯ್ಕೆ ಮಾಡಬೇಕು ಎಂದು ಅಂಗವಿಕಲರ ಕಲ್ಯಾಣಾಧಿಕಾರಿಗೆ ತಿಳಿಸಿದರು. ಅಂಗವಿಕಲರ ದಿನಾಚರಣೆ ಸಂಬಂಧ ನಡೆಯುವ ಪೂರ್ವಭಾವಿ ಸಭೆಗೆ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT