ಶಿರಾಳಕೊಪ್ಪ: ಐತಿಹಾಸಿಕ ಗ್ರಾಮ ತಾಳಗುಂದದಲ್ಲಿ ಎರಡನೆ ಹಂತದ ಪ್ರಾಯೋಗಿಕ ಉತ್ಖನನ ಕಾರ್ಯ ಭರದಿಂದ ಸಾಗಿದೆ.
ಈ ವೇಳೆ ಕಂಚಿನ ಪೂಜಾ ಸಾಮಗ್ರಿಗಳಾದ ಘಂಟೆ, ಆರತಿ ತಟ್ಟೆ, ದೀಪ, ಧೂಪಾರತಿ, ಹಣತೆ, ಭಗ್ನವಾದ ವಿಷ್ಣುಮೂರ್ತಿ, ಶಾಸನಗಳ ತುಣುಕುಗಳು, ಸುಂದರ ಕಲಾಕೃತಿ ಹೊಂದಿರುವ ಹೆಂಚು, ವಿಶೇಷವಾದ ದೊಡ್ಡ ಸುಣ್ಣದ ಕಲ್ಲು ಸಿಕ್ಕಿದ್ದು ಅದನ್ನು ಭಗ್ನವಾಗಿರುವ ಶಿವಲಿಂಗವಿರಬಹುದು ಎಂದು ಅಂದಾಜಿಸಲಾಗಿದೆ.
ಚಂದ್ರಶಿಲೆಯ ಚಂದ್ರಾಕೃತಿಯ ಮೆಟ್ಟಿಲುಗಳು ನೆಲದಿಂದ ಸುಮಾರು 3 ಅಡಿ ಆಳದಲ್ಲಿ ಲಭ್ಯವಾಗಿದ್ದು ಉತ್ಖನನ ಕಾರ್ಯಕ್ಕೆ ಮತ್ತಷ್ಟು ಸ್ಫೂರ್ತಿ ದೊರಕಿದೆ.
ಕನ್ನಡದ ಮೊದಲ ದೊರೆ ಮಯೂರ ವರ್ಮನ ಮೂಲ ನೆಲೆ, ಕನ್ನಡದ ಮೊದಲ ವಿದ್ಯಾಕೇಂದ್ರ ಎಂದು ಹೇಳಲಾಗಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಾಲಯದ ಉತ್ಖನನ ಕಾರ್ಯ ನಡೆಯಬೇಕು ಎಂದು ಈ ಭಾಗದ ಜನರು ಪುರಾತತ್ವ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಪುರಾತತ್ವ ಇಲಾಖೆ ಫೆಬ್ರುವರಿ ತಿಂಗಳಿನಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿತ್ತು.
ಆ ಸಂದರ್ಭದಲ್ಲಿ ಗಂಗರ ಕಾಲದ 13 ಚಿನ್ನದ ನಾಣ್ಯಗಳು, ಖಳಚೂರರ ತಾಮ್ರದ ತಟ್ಟೆಗಳು ಲಭಿಸಿದ್ದವು.
ಈ ಬಗ್ಗೆ ರಾಜ್ಯ ಪುರಾತತ್ವ ಶಾಸ್ತ್ರಜ್ಞರ ಉಪ ಮೇಲ್ವಿಚಾರಕ ಕೇಶವ ಶರ್ಮ ಮಾತನಾಡಿ, ತಾಳಗುಂದದಲ್ಲಿ ಹುದುಗಿ ಹೋಗಿರುವ ಇತಿಹಾಸ ಹೊರಗೆಡವಲು ಪುರಾತತ್ವ ಇಲಾಖೆ ಮುಂದಾಗಿದ್ದು. ಉತ್ಖನನ ಕಾರ್ಯ ಪೂರ್ಣವಾದ ನಂತರವೇ ಇಲ್ಲಿಯ ಇತಿಹಾಸದ ಸ್ಪಷ್ಟ ಮಾಹಿತಿ ಲಭಿಸುತ್ತದೆ ಎಂದರು.