ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗದ ಸಮೀಕ್ಷೆ ಕೈಗೊಳ್ಳಲಾಗಿದೆ. ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗದ ಕನಸು 50 ವರ್ಷ ಹಿಂದಿನದು. ಅದೀಗ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬೇಕಾಗಿದೆ.
ಹೊನ್ನಾವರಕ್ಕೆ ಕೊಂಕಣ ರೈಲ್ವೆ ಸಂಪರ್ಕ ಬಂದಿದೆ. ನಮಗೀಗ ಘಟ್ಟದ ಮೇಲಿನ ನಾಡಿಗೆ ರೈಲ್ವೆ ಬೇಕು. ತಾಳಗುಪ್ಪಕ್ಕೆ ಬಂದ ರೈಲು ಸಿದ್ದಾಪುರ, ಶಿರಸಿ, ಮುಂಡಗೋಡ ದಾಟಿ ಹುಬ್ಬಳ್ಳಿಗೆ ತಲುಪಬೇಕು. ಇದು ಉತ್ತರಕನ್ನಡದ ಜನರಿಗೆ ಅಗತ್ಯವಿದೆ. ಇದರಿಂದ ಇತ್ತ ಬೆಂಗಳೂರು ಸಂಪರ್ಕ, ಅತ್ತ ಹುಬ್ಬಳ್ಳಿ-ಮುಂಬೈಗೆ ರೈಲ್ವೆಯ ಅನುಕೂಲವಾಗುತ್ತದೆ.
ತಾಳಗುಪ್ಪ-ಹೊನ್ನಾವರ ರೈಲ್ವೆಯ ಸಮೀಕ್ಷೆ ಕಾರ್ಯ ಯಾವ ಕಡೆಯಲ್ಲಿ ನಡೆಯುವುದೆಂದು ಗೊತ್ತಾಗಿಲ್ಲ. ಈ ಹಿಂದಿನ ಕಲ್ಪನೆಯಂತೆ ತಾಳಗುಪ್ಪದಿಂದ ಹೊನ್ನಾವರದವರೆಗೆ ದೊಡ್ಡ ದೊಡ್ಡ ಊರು, ಜನವಸತಿ, ಕೈಗಾರಿಕೆ ಯಾವುದೂ ಇಲ್ಲ. ಮತ್ತು ಶರಾವತಿ-ಲಿಂಗನಮಕ್ಕಿಯ ಹಿನ್ನೀರು ಪ್ರದೇಶ ಶರಾವತಿ ನದಿಯುದ್ದಕ್ಕೂ ಗುಡ್ಡ-ಕಂದಕ ಪ್ರದೇಶ, ತುಂಬ ದಟ್ಟಡವಿ, ಅನೇಕ ಸುರಂಗಗಳು, ಸೇತುವೆಗಳೂ ಬೇಕಾದೀತು. ಇದು ಬಹಳ ದುಬಾರಿ ಯೋಜನೆಯಾದೀತು.
ಆದ್ದರಿಂದ ತಾಳಗುಪ್ಪ-ಹುಬ್ಬಳ್ಳಿ, ಸಿದ್ದಾಪುರ-ಶಿರಸಿ ಮಾರ್ಗವಾದರೆ ಈ ಭಾಗದ ಅಭಿವೃದ್ಧಿ ಆದೀತು.
ಶಿರಸಿ ಜಿಲ್ಲಾ ವಾಣಿಜ್ಯ ಕೇಂದ್ರಸ್ಥಳ, ಅನೇಕ ಕೃಷಿ-ಕೈಗಾರಿಕೆ, ವ್ಯಾಪಾರ ಕೇಂದ್ರವಾಗಿದೆ. ಮತ್ತು ಘಟ್ಟದ ಮೇಲಿನ ನಾಡಿಗೆ ರೈಲ್ವೆ ಸಂಪರ್ಕವಾಗುತ್ತದೆ. ರೈಲ್ವೆ ಮಾರ್ಗ ಕಾಮಗಾರಿಯೂ ಸುಲಭ. ಅನಂತರ ಆದಾಯವೂ ಲಾಭಕರವಾದೀತು. ಮುಂದೆ ಹುಬ್ಬಳ್ಳಿ-ಅಂಕೋಲಾದ ರೈಲ್ವೆ ಬಂದರೆ ನಮಗೆ ಕೊಂಕಣ ರೈಲ್ವೆ ಸಂಪರ್ಕವೂ ದೊರೆಯುತ್ತದೆ.
ತಾಳಗುಪ್ಪ-ಹೊನ್ನಾವರ ರೈಲ್ವೆ ವ್ಯಾವಹಾರಿಕವಲ್ಲ, ಇದನ್ನು ಉತ್ತರಕನ್ನಡ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದವರು ಗಮನಿಸಬೇಕು. ಮತ್ತು ನೈರುತ್ಯ ರೈಲ್ವೆಯವರಿಗೆ ಮಾರ್ಗದರ್ಶನ ಮಾಡಬೇಕಾಗಿದೆ. ಜಿಲ್ಲೆಯ ಸಂಸದರು ಈ ಬಗ್ಗೆ ಗಮನಹರಿಸಬೇಕಿದೆ.
ಇತ್ತೀಚೆಗೆ ಶಿರಸಿಗೆ ಬಂದು ಪರಿಶೀಲನೆ ಮಾಡಿದ ರಾಮಚಂದ್ರ ಸಮಿತಿಗೆ ಉತ್ತರ ಕನ್ನಡದ ಜನ ಪ್ರತಿನಿಧಿಗಳು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಪದಾಧಿಕಾರಿಗಳು ಸರಿಯಾದ ಮಾಹಿತಿ ಕೊಡಬೇಕಾಗಿತ್ತು ನಮ್ಮ ಜಿಲ್ಲಾ ಸಂಸದರು ಸಂಸತ್ತಿನಲ್ಲಿ ಬಾಯಿಬಿಟ್ಟರೆ ಇದು ಸಾಧ್ಯ.
-
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.