ತಾಳಿಕೋಟೆ: ಪಟ್ಟಣದ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರಂಭವಾದ ಮುದ್ದೇಬಿಹಾಳ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವೈಭವವನ್ನು ವರ್ಣಿಸಲು ಶಬ್ದಗಳಿರಲಿಲ್ಲ.
ಇದು ಮನೆಮನೆಯ ಹಬ್ಬವಾಗಿತ್ತು. ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನವಾದ್ದರಿಂದ ಸಹಜವಾಗಿಯೇ ಎಲ್ಲರಲ್ಲೂ ಉತ್ಸಾಹ ಎದ್ದು ಕಾಣುತ್ತಿತ್ತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯೂ ವೈಭವಯುತವಾಗಿತ್ತು.
ರಾಜವಾಡೆಯಿಂದ ಆರಂಭಗೊಂಡ ನಾಡದೇವಿಯ ಮೆರವಣಿಗೆಯನ್ನು ಪುರಸಭೆಯ ಅಧ್ಯಕ್ಷ ಎಂ.ಕೆ.ಚೋರಗಸ್ತಿ ಉದ್ಘಾಟಿಸಿದರು. ಮೆರವಣಿಗೆಯ ತೇರಿನಲ್ಲಿ, ಸಮ್ಮೇಳನಾಧ್ಯಕ್ಷ ಪ್ರೊ.ಬಿ.ಎಂ.ಹಿರೇಮಠ ಅವರನ್ನು ವೇದಿಕೆಯವರೆಗೆ ಕರೆತರಲಾಯಿತು. ಸಾಲು, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಕರಡಿ ಮಜಲು, ಬ್ಯಾಂಜೋ ವಾದ್ಯವೃಂದ ಕಳೆ ಕಟ್ಟಿತು. ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ್ರ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.
ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ನಾಡ ಧ್ವಜಾರೋಹಣ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಹಣವನ್ನು ತಾಲ್ಲೂಕು ಕ.ಸಾ.ಪ ಅಧ್ಯಕ್ಷೆ ಶಾಂತಾಬಾಯಿ ನೂಲೀಕರ ನೆರವೇರಿಸಿದರು.