ಉಡುಪಿ: `ಪುರಾಣ ಜ್ಞಾನ ತಿಳಿಯಲು ಯಕ್ಷಗಾನದ ಶ್ರಾವ್ಯ ಪ್ರಕಾರ ತಾಳಮದ್ದಲೆ ಅಪೂರ್ವ ಮಾಧ್ಯಮ~ ಎಂದು ಪರ್ಯಾಯ ಸೋದೆ ವಾದಿರಾಜಮಠದ ವಿಶ್ವವಲ್ಲಭ ತೀರ್ಥರು ಇಲ್ಲಿ ಅಭಿಪ್ರಾಯಪಟ್ಟರು.
ಪ್ರಥಮ ಪರ್ಯಾಯ ಕಲೆ- ಸಂಸ್ಕತಿಯ ಪರ್ಯಾಯವಾಗಿ ರೂಪುಗೊಳ್ಳಬೇಕು ಎಂದು ಸಂಕಲ್ಪಿಸಿ ಪುರಪ್ರವೇಶದಿಂದ ಮೊದಲ್ಗೊಂಡು ಮೂರು ವಾರವನ್ನು ವಿವಿಧ ಕಲಾಕಾರ್ಯಕ್ರಮಗಳಿಂದ ವೈಭವಪೂರ್ಣವಾಗಿ ನಡೆಸಿದ ಸ್ವಾಮೀಜಿ, ಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ತಿಂಗಳ ತಾಳಮದ್ದಲೆ ಸರಣಿ ಉದ್ಘಾಟಿಸಿ ಅವರು ಮಾತನಾಡಿದರು.
`ಯಕ್ಷಗಾನ ತಾಳಮದ್ದಲೆಯಿಂದ ಪುರಾಣದ, ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಅರಿಯಲು ಸಾಧ್ಯವಾಗುತ್ತದೆ. ಶ್ರಾವ್ಯ ಪ್ರಕಾರವಾಗಿ ಇದು ಹೆಚ್ಚು ಗಮನ ಸೆಳೆಯುತ್ತದೆ~ ಎಂದರು.
`ಸರಣಿ ತಾಳಮದ್ದಲೆ ಮತ್ತು ಯಕ್ಷಗಾನ ಸಂಯೋಜನೆಯ ಹೊಣೆಯನ್ನು ಯಕ್ಷಗಾನ ಕಲಾರಂಗಕ್ಕೆ ವಹಿಸಿದ್ದು, ಮಹಾಭಾರತದ 23 ಆಯ್ದ ಪ್ರಸಂಗಗಳನ್ನು ಈ ಸರಣಿಗೆ ಅಳವಡಿಸಲಾಗಿದೆ. ಪ್ರತಿ ತಿಂಗಳ ಎರಡನೇ ಭಾನುವಾರ ಮಧ್ಯಾಹ್ನ 2.30ರಿಂದ 5.30 ರವರೆಗೆ ತಾಳಮದ್ದಲೆಗೆ ಸಮಯ ನಿಗದಿಪಡಿಸಲಾಗಿದೆ~ ಎಂದು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ತಿಳಿಸಿದರು.
ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬಳೆ ಸುಂದರ ರಾವ್, ಹಿರಿಯ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಎಂ.ಗಂಗಾಧರ ರಾವ್, ನಾರಾಯಣ ಎಂ.ಹೆಗಡೆ ಉಪಸ್ಥಿತರಿದ್ದರು.
ಸರಣಿಯ ಮೊದಲ ತಾಳಮದ್ದಲೆಯಾಗಿ `ಭೀಷ್ಮೋತ್ಪತ್ತಿ~ ಪ್ರಸ್ತುತಪಡಿಸಲಾಯಿತು.