ಬೇಲೂರು: ‘ಕೆನರಾ ಬ್ಯಾಂಕ್ ವತಿಯಿಂದ ಇನ್ನೊಂದು ತಿಂಗಳೊಳಗೆ ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಜಾರಿಗೊಳಿಸಲಾಗುತ್ತದೆ’ ಎಂದು ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ರಾಮನ್ ಭಾನುವಾರ ಹೇಳಿದರು.
ಚೆನ್ನಕೇಶವಸ್ವಾಮಿ ದೇಗುಲವನ್ನು ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೊಬೈಲ್ ಫೋನ್ ಮೂಲಕ ಹಣ ವರ್ಗಾವಣೆ ಸೇರಿದಂತೆ ಇನ್ನಿತರ ವ್ಯವಹಾರ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.ಇದು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ.ಇದರ ಜೊತೆಗೆ ಗಿಫ್ಟ್ ಕಾರ್ಡ್, ಟ್ರ್ಯಾವೆಲ್ ಕಾರ್ಡ್ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ’ ತಿಳಿಸಿದರು.
‘ಶಿಕ್ಷಣ ಕ್ಷೇತ್ರಕ್ಕೆ 3,500 ಕೋಟಿ ಸಾಲ ನೀಡಲಾಗಿದೆ.ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದ ಅವರು, ‘10 ವರ್ಷಗಳ ಅವಧಿಯಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ.ಸಾಲ ಪಡೆದ ಗ್ರಾಹಕರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಭಾರತದ ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ವದ ಬದಲಾವಣೆಯಾಗುತ್ತದೆ’ ಎಂದರು.
ಮೈಸೂರು ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಿ.ಎಸ್. ಐಯ್ಯರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎ.ಕೆ.ಸಾಹು, ಬೇಲೂರು ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್.ಆರ್.ಕುಡುವಾ, ವ್ಯವಸ್ಥಾಪಕ ರಾಜಶೇಖರ್, ಸಿಬ್ಬಂದಿಗಳಾದ ನೋಣಯ್ಯ, ಪ್ರಶಾಂತ್ ಪೂಜಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಆರ್.ವೆಂಕಟೇಗೌಡ, ಆರ್. ಸುಬ್ರಹ್ಮಣ್ಯ, ವಕೀಲ ವೈ.ಸಿ.ಮೋಹನ್ ಹಾಜರಿದ್ದರು.