ಗೌರಿಬಿದನೂರು: ಪಟ್ಟಣದ ಉಪ್ಪಾರ ಕಾಲೊನಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹುಳು ಬಿದ್ದಿರುವ ತಿಂಡಿ, ಊಟವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ವಸತಿ ಶಾಲೆ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಮಲಗುವ ಜಾಗದಲ್ಲಿಯೇ ತರಗತಿಗಳು ನಡೆಯುತ್ತಿವೆ. ಅಲ್ಲಿಯೇ ಅಡುಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಹಾಸ್ಟೆಲ್ ಸಿಬ್ಬಂದಿ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸದೇ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿನಿತ್ಯ ನೀಡುವ ಆಹಾರದಲ್ಲಿ ಹುಳು ಇರುವ ಬಗ್ಗೆ ಹೊರಗುತ್ತಿಗೆ ಸಿಬ್ಬಂದಿಗೆ ಪ್ರಶ್ನಿಸಿದರೆ ಅವಾಚ್ಯವಾಗಿ ಬೈಯುತ್ತಾರೆ. ಶೌಚಾಲಯ ಸ್ವಚ್ಛಗೊಳಿಸುವುದಿಲ್ಲ. ಸಿಬ್ಬಂದಿ ಇದ್ದರೂ ನಮ್ಮ ಕೈಯಲ್ಲಿಯೇ ಕಸ ಗುಡಿಸಲು ಹೇಳುತ್ತಾರೆ ಎಂದು ಅಳಲು ತೋಡಿಕೊಂಡರು.
ಶಾಲೆಯ ಕಿಟಕಿ ಬಾಗಿಲುಗಳು ಮುರಿದಿವೆ. 6ನೇ ತರಗತಿ ಮಕ್ಕಳಿಗೆ ಹೊದಿಕೆ ನೀಡಿಲ್ಲ. ಚಳಿಯಲ್ಲಿಯೇ ಮಲಗಬೇಕಾಗಿದೆ. ಕುಡಿದು ಬರುವ ಸಿಬ್ಬಂದಿ ಬಗ್ಗೆ ವಾರ್ಡನ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶಗೊಂಡು ಹೇಳಿದರು.
ಪ್ರತಿನಿತ್ಯ ಅನ್ನ, ಸಾಂಬರ್, ತಿಂಡಿಯಲ್ಲಿ ಹುಳುಗಳು ಇದ್ದರೂ ಅನಿವಾರ್ಯವಾಗಿ ತಿನ್ನಲೇಬೇಕಾಗಿದೆ. ಚಳಿ ಹಾಗೂ ಸೊಳ್ಳೆಗಳಿಂದ ನಿದ್ದೆಯೂ ಬರುವುದಿಲ್ಲ. ಹಲವರಿಗೆ ಚಳಿಯಿಂದ ಜ್ವರ ಬಂದು ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ದೂರಿದರು.
ಸಂಬಂಧಪಟ್ಟ ಉನ್ನತ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.
ಕೊನೆಗೆ ವಾರ್ಡನ್ ಬಂದು ವಿದ್ಯಾರ್ಥಿನಿಯರಿಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಸಮಾಧಾನಗೊಳಿಸಿದರು.