ಬೀದರ್: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಆಗದಿದ್ದರೆ ಸಂಸತ್ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಗುರುವಾರ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭ ಮುಗಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಕೆಲವು ಪ್ರತಿಭಟನೆಕಾರರು `ಧರ್ಮಸಿಂಗ್ಗೆ ಧಿಕ್ಕಾರ~ ಕೂಗಿದರು ಮತ್ತು ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು. ಪೊಲೀಸರು ಪ್ರತಿಭಟನೆಕಾರರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಧರ್ಮಸಿಂಗ್ `371ನೇ ವಿಧಿಯ ತಿದ್ದುಪಡಿಗಾಗಿ ಅವಿರತ ಪ್ರಯತ್ನ ನಡೆದಿದೆ. ಉತ್ತರ ಪ್ರದೇಶ ಚುನಾವಣೆ ಮುಗಿದ ನಂತರ ಅದಕ್ಕೊಂದು ಸ್ಪಷ್ಟ ರೂಪ ಸಿಗಲಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ತರುವುದಾಗಿ ಕೇಂದ್ರ ಗೃಹಸಚಿವ ಚಿದಂಬರಂ ಭರವಸೆ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ತಿದ್ದುಪಡಿ ಸಾಧ್ಯವೇ ಇಲ್ಲ ಎಂದಾದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ~ ಎಂದರು.
`ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ~ ಎಂಬ ಮುಖ್ಯಮಂತ್ರಿ ಸದಾನಂದಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ `371ನೇ ವಿಧಿಗೆ ತಿದ್ದುಪಡಿ ಅಂದರೆ ಅವರಿಗೇನು ಗೊತ್ತಿದೆ? ಸುಮ್ಮನೆ ನಾಲ್ಕಾರು ಜನರನ್ನು ಕಳುಹಿಸಿ ಘೋಷಣೆ ಕೂಗಿಸಿದರೆ ಸಂವಿಧಾನದ ತಿದ್ದುಪಡಿ ಆಗುವುದಿಲ್ಲ. ಅದಕ್ಕೆ ಸಂಘಟಿತ ಪ್ರಯತ್ನ ಬೇಕು. ಆ ಪ್ರಕ್ರಿಯೆ ಜಾರಿಯಲ್ಲಿದೆ. ತಿದ್ದುಪಡಿಗೆ ಸಂಬಂಧಿಸಿ ಸಂಪುಟದ ಸಭೆಯಲ್ಲಿ ಚರ್ಚಿಸಲು ಟಿಪ್ಪಣಿ ಸಿದ್ಧಪಡಿಸುವಂತೆ ಚಿದಂಬರಂ ಸೂಚಿಸಿದ್ದಾರೆ~ ಎಂದರು.
ಅದಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಸೇರಿ ನಡೆಸಿದ ಪ್ರಯತ್ನವೇ ಕಾರಣ. ಪ್ರತಿಭಟನೆಕಾರರು ಅದನ್ನು ಅರಿತುಕೊಳ್ಳಬೇಕು. ಘೋಷಣೆ ಕೂಗುವುದರಿಂದ ಏನೂ ಆಗುವುದಿಲ್ಲ~ ಎಂದು ತಿಳಿಸಿದರು.