ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪಗೊಂಡನಹಳ್ಳಿಯಿಂದ ನೀರು ಪೂರೈಕೆ ಶೀಘ್ರ ಸ್ಥಗಿತ

Last Updated 5 ಡಿಸೆಂಬರ್ 2012, 19:38 IST
ಅಕ್ಷರ ಗಾತ್ರ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆಯನ್ನು ಇನ್ನು ಆರು ತಿಂಗಳಲ್ಲಿ ನಿಲ್ಲಿಸಲು ಬೆಂಗಳೂರು ಜಲಮಂಡಲಿ ನಿರ್ಧರಿಸಿದೆ. ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗದೇ ಇರುವುದರಿಂದ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿವೆುಯಾಗುತ್ತಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನಗರದ ರಾಜಾಜಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಇನ್ನು ಮುಂದೆ ಈ ಪ್ರದೇಶಗಳಿಗೆ ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆಯಿಂದ ನೀರು ಪೂರೈಸಲು ಜಲಮಂಡಲಿ ಚಿಂತನೆ ನಡೆಸಿದೆ.

`ಮಳೆ ಕೊರತೆಯ ಕಾರಣದಿಂದ 1985ರಲ್ಲಿ ಮೊದಲಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಆ ನಂತರ 2002ರಲ್ಲೂ ಮಳೆ ಕೊರತೆಯಿಂದ ನೀರು ಪೂರೈಕೆಯನ್ನು ನಿಲ್ಲಿಸಲಾಗಿತ್ತು. ನಗರಕ್ಕೆ ಪ್ರತಿ ದಿನಕ್ಕೆ 130 ಮಿಲಿಯನ್ ಲೀಟರ್ ನೀರು ಪೂರೈಕೆಯಾಗುತ್ತಿದ್ದ ಜಲಾಶಯದಿಂದ ಇತ್ತೀಚೆಗೆ ಕೇವಲ 28 ಮಿಲಿಯನ್ ಲೀಟರ್ ನೀರು ಪೂರೈಕೆಯಾಗುತ್ತಿದೆ. ಈ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ' ಎಂದು ಜಲಮಂಡಲಿ ಅಧಿಕಾರಿಗಳು ತಿಳಿಸಿದ್ದಾರೆ.

`ಜಲಾಶಯದಿಂದ ನಗರಕ್ಕೆ ನೀರು ಪಂಪ್ ಮಾಡುವ ವೆಚ್ಚ ಅಧಿಕವಾಗುತ್ತಿದ್ದು, ಇದು ಜಲಮಂಡಲಿಗೆ ಹೆಚ್ಚಿನ ಹೊರೆಯಾಗಿದೆ. ಇನ್ನು ಮುಂದೆ ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ನೀರು ರಾಜಾಜಿನಗರ ಭಾಗಗಳಿಗೂ ಪೂರೈಕೆಯಾಗುವ ಹಿನ್ನೆಲೆಯಲ್ಲಿ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿವೆುಯಾಗುತ್ತಿರುವುದರಿಂದ ಜಲಾಶಯದ ನೀರು ಸಂಪೂರ್ಣವಾಗಿ ಒಣಗಿ ಜಲಚರಗಳು ಸಾಯುವ ಆತಂಕವೂ ಎದುರಾಗಿದೆ. ಇತ್ತೀಚೆಗೆ ಕಾವೇರಿ ನೀರಾವರಿ ನಿಗಮವು ಜಲಾಶಯಕ್ಕೆ ನೀರು ಹರಿದು ಬರುವ ಅರ್ಕಾವತಿ ಜಲಾನಯನ ಪ್ರದೇಶದ ಪುನಶ್ಚೇತನಕ್ಕಾಗಿ 23 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಕಾರ್ಯಗತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT