ಉಜಿರೆ: ಧರ್ಮಸ್ಥಳದ ಸ್ಫೂರ್ತಿ ಮತ್ತು ಪ್ರೇರಣೆಯಿಂದ ತಿರುಪತಿಯಲ್ಲಿ ಅನ್ನದಾನ, ಆರೋಗ್ಯ ಸೇವೆ ಪ್ರಾರಂಭಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಆದಿಕೇಶವುಲು ಹೇಳಿದರು.
ಧರ್ಮಸ್ಥಳದಲ್ಲಿ ಭಕ್ತಾದಿಗಳ ಮುಡಿ ಸಮರ್ಪಣೆಗಾಗಿ ನಿರ್ಮಿಸಿದ ಶ್ರೀಮುಡಿ ಭವನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಿರುಪತಿಯ ಧರ್ಮಸ್ಥಳದ ರೀತಿ 1982ರಲ್ಲಿ ನಿತ್ಯ ಅನ್ನದಾನ ಪ್ರಾರಂಭಿಸಲಾಗಿದೆ. ಅಂದು ಪ್ರತಿದಿನ 5000 ಭಕ್ತಾದಿಗಳಿಗೆ ಅನ್ನದಾನ ನೀಡಿದರೆ ಇಂದು ಪ್ರತಿ ದಿನ 50,000 ಭಕ್ತರಿಗೆ ಅನ್ನದಾನ ಮಾಡಲಾಗುತ್ತಿದೆ. ಅನ್ನದಾನಕ್ಕಾಗಿ ಅಂದು ರೂ 20 ಕೋಟಿ ಠೇವಣಿ ಇಟ್ಟರೆ. ಈಗ ರೂ 300 ಕೋಟಿ ಠೇವಣಿ ಇಟ್ಟು ಅದರ ಬಡ್ಡಿಯನ್ನು ಅನ್ನದಾನಕ್ಕೆ ವಿನಿಯೋಗಿಸಲಾಗುತ್ತಿದೆ. ಅನ್ನದಾನವು ಭಕ್ತರಿಗೆ ಅತ್ಯಂತ ಪ್ರಿಯವಾಗಿದ್ದು ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ ಎಂದರು.
ಧರ್ಮಸ್ಥಳದ ಮಾದರಿಯಲ್ಲೇ ತಿರುಪತಿಯಲ್ಲಿ ಆರೋಗ್ಯ ಸೇವೆಯನ್ನೂ ಪ್ರಾರಂಭಿಸಲಾಗಿದೆ ಎಂದರು. ಶ್ರೀಮುಡಿ ಭವನದಲ್ಲಿ ಭಕ್ತಾದಿಗಳಿಗೆ ಏರ್ಪಡಿಸಿದ ಸೌಲಭ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ನಳಿನ್ಕುಮಾರ್ ಕಟೀಲ್ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ ಭಕ್ತರು ದೇವರಿಗೆ ತಲೆ ಕೂದಲು ಆರ್ಪಿಸುವುದು ಅವರ ನಂಬಿಕೆ - ನಡವಳಿಕೆಯ ಹಾಗೂ ಸಂಕಲ್ಪ ಶಕ್ತಿಯ ಪ್ರತೀಕವಾಗಿದೆ ಎಂದರು.