ತಿರುವನಂತಪುರ (ಪಿಟಿಐ): ತಿರುವಾಂಕೂರು ರಾಜವಂಶಸ್ಥ ಉತ್ರಾಡಂ ತಿರುನಾಳ್ ಮಾರ್ತಾಂಡವರ್ಮ ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.
91 ವರ್ಷದ ವರ್ಮ ಸುಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಜೀರ್ಣಾಂಗನಾಳದ ರಕ್ತಸ್ರಾವದ ಕಾರಣ ಕಳೆದ ವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಕುಂಟುಂಬ ಮೂಲಗಳು ತಿಳಿಸಿವೆ.
ಇವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಇವರ ಪತ್ನಿ ಈ ಮೊದಲೇ ಮರಣ ಹೊಂದಿದ್ದಾರೆ.
ತಿರುವಾಂಕೂರು ಸಂಸ್ಥಾನದ ಕಡೆಯ ರಾಜರಾಗಿದ್ದ ಇವರ ಹಿರಿಯ ಸಹೋದರ ಚಿತಿರಾ ತಿರುನಾಳ್ ಬಲರಾಮ ವರ್ಮಾ 1991ರಲ್ಲಿ ನಿಧನರಾದ ನಂತರ ಮಾರ್ತಾಂಡ ವರ್ಮ ರಾಜಮನೆತನದ ಮುಖ್ಯಸ್ಥರಾಗಿದ್ದರು.
2011ರಲ್ಲಿ ಪದ್ಮನಾಭಸ್ವಾಮಿ ದೇವಾಲಯದ ನೆಲಮಾಳಿಗೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾದಾಗ ದೇವಸ್ಥಾನ ಮತ್ತು ರಾಜಮನೆತನ ಎರಡೂ ಪ್ರಸಿದ್ಧಿಗೆ ಬಂದಿದ್ದವು.