ಮುಂಡರಗಿ: `ಗ್ರಾಮೀಣ ಭಾಗಗಳಲ್ಲಿ ಸೌಲಭ್ಯಗಳ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗುವವರಿಗಿಂತ, ತಿಳುವಳಿಕೆ ಕೊರತೆಯಿಂದ ಅನಾರೋಗ್ಯಕ್ಕೆ ಈಡಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನ ಜಾಗೃತಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜನರಲ್ಲಿ ಆರೋಗ್ಯ ಕುರಿತು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಎಂ.ಪಾಟೀಲ ಹೇಳಿದರು.
ತಾಲ್ಲೂಕು ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಆರೋಗ್ಯ ಇಲಾಖೆ ಸಂಯುಕ್ತವಾಗಿ ಸ್ಥಳೀಯ ಕ್ಷೇತ್ರ ಸಂಪನ್ನೂಲ ಕೇಂದ್ರದಲ್ಲಿ `ಶಾಲಾ ಮಕ್ಕಳ ಆರೋಗ್ಯವೃದ್ಧಿ ಚಟುವಟಿಕೆ~ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ನಮ್ಮ ಸುತ್ತಮುತ್ತ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲ ಲಭ್ಯವಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಹಿಂದಿದ್ದೇವೆ. ನಮ್ಮ ಆರೋಗ್ಯದ ಮೇಲೆ ಪರಿಸರ ನೇರವಾಗಿ ಪ್ರಭಾವ ಬೀರುತ್ತಿದ್ದು, ಪರಿಸರ ರಕ್ಷಣೆ, ಅಭಿವೃದ್ಧಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ~ ಎಂದು ತಿಳಿಸಿದರು.
ಆರೋಗ್ಯ ನಿರ್ವಹಣೆಯಂತಹ ಆರೋಗ್ಯ, ಶಿಕ್ಷಣ ಇಲಾಖೆಗಳ ಮೇಲೆ ಹಾಕದೆ, ಸಮಾಜದ ಎಲ್ಲ ವರ್ಗದ ಜನರು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆ ಮೂಲಕ ಸಮುದಾಯ ಆರೋಗ್ಯ ಕಾಪಾಡಬೇಕು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಹೇಳಿದರು.
`ಆಧುನಿಕ ಜೀವನ ಶೈಲಿಯಲ್ಲಿ ನಾವೆಲ್ಲ ದಿನನಿತ್ಯ ವಿವಿಧ ರೀತಿಯ ಒತ್ತಡಗಳಿಗೆ ತುತ್ತಾಗುತ್ತಿದ್ದು, ಯೋಗ, ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆ ಮೈಗೂಡಿಸಿಕೊಳ್ಳುವ ಮೂಲಕ ಒತ್ತಡದ ಬದುಕಿನಿಂದ ಮುಕ್ತಿ ಪಡೆಯಬೇಕು. ಹಣ ಮಾಡುವುದೇ ಜೀವನದ ಮುಖ್ಯ ಗುರಿ ಎಂದು ಭಾವಿಸದೆ ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು~ ಎಂದು ಡಾ.ಪಿ.ಬಿ.ಹಿರೇಗೌಡರ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅಕ್ಕಮಹಾದೇವಿ ಹಾರೊಗೇರಿ ಸಮಾರಂಭ ಉದ್ಘಾಟಿಸಿದರು. ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ದೊಂಬರ ಹಾಗೂ ಮತ್ತಿತರರು ಹಾಜರಿದ್ದರು. ಡಾ.ಬಿ.ಸಿ.ಕರಿಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ದೇವರಡ್ಡಿ ಕಾರ್ಯಕ್ರಮ ನಿರೂಪಿಸಿದರು. ಡಾ.ಸುರೇಶ ಹೊಸಮನಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.